ಪಾಕ್ ಅಟ್ಟಹಾಸಕ್ಕೆ ಬೆಳಗಾವಿ ಯೋಧ ಬಲಿ
ಬೆಳಗಾವಿ, ಮೇ 20: ಇತ್ತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅತ್ತ ಗಡಿ ಭಾಗದಲ್ಲಿ ಪಾಕಿಸ್ತಾನದ ಉಪಟಳ ಎದುರಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪಡೆಗಳು ಭಾನುವಾರ ಗುಂಡಿನ ದಾಳಿ ನಡೆಸಿದ್ದು ಬೆಳಗಾವಿಯ ಯುವ ಯೋಧರೊಬ್ಬರು ಬಲಿಯಾಗಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ 2003ರ ನವೆಂಬರಿನಿಂದ ಕದನ ವಿರಾಮ ಜಾರಿಗೆ ಬಂದಿದೆ. ಆದರೂ ಪಾಕಿಸ್ತಾನ ಆಗಾಗ ಉಪಟಳ ನಡೆಸುತ್ತಾ ಬಂದಿದೆ. 2013ರಲ್ಲಿ ಪಾಕಿಸ್ತಾನದ ಇದೇ ಪಡೆಗಳು ಇಬ್ಬರು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿ, ಒಬ್ಬ ಯೋಧನ ಶಿರಚ್ಛೇದ ಮಾಡಿತ್ತು.

ಭಾರತ ಯೋಧರ ಮಾರಣ ಹೋಮ ನಡೆಸುತ್ತಿರುವುದರ ಮಧ್ಯೆಯೇ, ನೂತನವಾಗಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಭಾರತ ಸರಕಾರದ ಜತೆ ಯಾವುದೇ ಷರತ್ತು ಇಲ್ಲದೆ ಭಾರತದ ಜತೆ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನವು ತಿಳಿಸಿದೆ.
ಭಾನುವಾರ ಬೆಳಗ್ಗೆ ಈ ಕುಕೃತ್ಯ ನಡೆದಿದ್ದು, ನೆಲಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯಲ್ಲಿ ಬೆಳಗಾವಿ ಗಡಿಭಾಗದ ಗಡಹಿಂಗ್ಲಜ ಪಟ್ಟಣದ ಯೋಧ ಉತ್ತಮ್ ಬಾಳು ಭಿಕಲೆ (30) ಹುತಾತ್ಮರಾಗಿದ್ದಾರೆ. ಮೃತ ಉತ್ತಮ್ ಬಾಳು ಅವರು ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ 2 ಮರಾಠಾ ಲಘು ಪದಾತಿದಳದ ಸಿಪಾಯಿಯಾಗಿದ್ದರು. ಕುಕೃತ್ಯದಲ್ಲಿ ರಾಜ್ಯದ ಮತ್ತೊಬ್ಬ ಯೋಧ ಹವಾಲ್ದಾರ್ ವಿನೋದ್ ಕುಮಾರ್ ಸೇರಿ ಇಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಡಿ ಮುಂಚೂಣಿ ನೆಲೆಗಳಾದ ಪೂಂಛ್ ಜಿಲ್ಲೆಯ ಪಲಾವಾಲಾ ಸೆಕ್ಟರಿನ ಜೊಗವಾನಾ ಪ್ರದೇಶದಲ್ಲಿ ನೆಲಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ಉತ್ತಮ್ ಬಾಳು ಭಿಕಲೆ ಅವರನ್ನು ರಕ್ಷಿಸಲು 4 ಇಂಜಿನಿಯರುಗಳ ತಂಡ ಸ್ಥಳಕ್ಕೆ ಹೋದಾಗ ಪಾಕ್ ಯೋಧರು ಗುಂಡಿನ ದಾಳಿ ನಡೆಸಿ, ಉಳಿದವರನ್ನು ಗಾಯಗೊಳಿಸಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ಮನೀಷ್ ಮೆಹ್ತಾ ತಿಳಿಸಿದ್ದಾರೆ. (ಚಿತ್ರ ಕೃಪೆ)












Click it and Unblock the Notifications