ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಕೋಟಿ ಕೋಟಿ ಖರ್ಚು: ಚರ್ಚೆ ಮಾತ್ರ ಶೂನ್ಯ
ಬೆಳಗಾವಿ, ಡಿಸೆಂಬರ್ 07: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಪ್ರತಿ ವರ್ಷ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತದೆ. ಆದರೆ ಅಭಿವೃದ್ಧಿಯ ಚರ್ಚೆಗಳು ಮಾತ್ರ ಶೂನ್ಯ ಎಂದು ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರ ಹಾಗೂ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಪ್ಪ ಗಡಾದ, ಕಳೆದ ವರ್ಷ 2023 ಸಾಲಿನಲ್ಲಿ ನಡೆದ ಅಧಿವೇಶನಕ್ಕೆ 24 ಕೋಟಿ 89 ಲಕ್ಷ ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿದರು. ಸುವರ್ಣ ವಿಧಾನಸೌಧದಲ್ಲಿ ಒಟ್ಟು 10 ದಿನ ಅಧಿವೇಶನದ ಕಾರ್ಯ ಕಲಾಪಗಳ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸೇರಿ ಒಟ್ಟು ಅವಧಿ 124 ಗಂಟೆಗಳು ಅಧಿವೇಶನಕ್ಕೆ ವೆಚ್ಚ ಮಾಡಲಾದ ಒಟ್ಟು ಹಣಕ್ಕೆ ಲೆಕ್ಕ ಹಾಕಿ ನೋಡಿದಾಗ ಪ್ರತಿ ಗಂಟೆಗೆ ಸರಾಸರಿ 20 ಲಕ್ಷ 8 ಸಾವಿರ ವೆಚ್ಚ ಮಾಡಿರುವುದು ಕಂಡು ಬಂದಿದೆ. ಆದರೆ ಅಭಿವೃದ್ಧಿಯ ಚರ್ಚೆಗಳು ಮಾತ್ರ ಶೂನ್ಯ ಎಂದರು.

ಗಣ್ಯರ, ಮಾನ್ಯರ ವಸತಿಗಾಗಿ 6.82 ಕೋಟಿ, ಲೋಕೋಪಯೋಗಿ ಇಲಾಖೆಗೆ 5.71 ಕೋಟಿ, ಪೋಲಿಸ್ ಇಲಾಖೆಗೆ 7.32 ಕೋಟಿ, ಸಚಿವರ ಶಾಸಕರ ವಸತಿಗಾಗಿ 6.82 ಕೋಟಿ, ಅಧಿಕಾರಿಗಳ ಊಟ, ಉಪಹಾರ 2.35 ಕೋಟಿ ಹೀಗೆ ಹಲವಾರು ಪಟ್ಟಿಗಳ ಖರ್ಚುವೆಚ್ಚಗಳ ಲೆಕ್ಕ ಹಚ್ಚಿ ಸಾರ್ವಜನಿಕ ಹಣ ದುಂದು ವೆಚ್ಚವಾಗುತ್ತಿದೆ. ಇನ್ನು ಪೂರ್ಣ ಪ್ರಮಾಣದ ಕಲಾಪದಲ್ಲಿ ಕೇವಲ 53 ಶಾಸಕರು ಮಾತ್ರ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ಬಾರಿಯಾದರೂ ಸರ್ಕಾರದ ಅನುದಾನದ ಸಮರ್ಪಕವಾಗಿ ಬಳಕೆಯಾಗಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚೆ ಆಗಬೇಕು ಎಂದು ಮನವಿ ಮಾಡಿದರು.
ಶಾಸಕರಿಗೆ ಕಪ್ಪು ಬಟ್ಟೆ ಪ್ರದರ್ಶನದ ಎಚ್ಚರಿಕೆ
ಹುಬ್ಬಳ್ಳಿ: ಕಳಸಾ ಬಂಡೂರಿ, ಮಹದಾಯಿ ಸೇರಿದಂತೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿರುವ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ, ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿದ ಸಮಿತಿ ಸಂಚಾಲಕ ಸಿದ್ದಣ್ಣ ತೇಜಿ, ಹಗರಣಗಳ ಚರ್ಚೆ ನೆಪದಲ್ಲಿ ಅಧಿವೇಶನದ ಸಮಯ ವ್ಯರ್ಥ ಮಾಡಬಾರದು ಎಂದು ಆಗ್ರಹಿಸಿದರು. ಅಲ್ಲದೇ ಉತ್ತರ ಕರ್ನಾಟಕದ ನೀರಾವರಿ ಯೋಜನೆ, ಅನುದಾನ ತಾರತಮ್ಯ, ಉದ್ಯೋಗ ಹಾಗೂ ಮತ್ತಿತರ ವಿಷಯಗಳನ್ನು ಗಂಭೀವಾಗಿ ರ್ಚಚಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳಗಾವಿ ಅಧಿವೇಶನ ನಡೆಸುತ್ತಿರುವ ಉದ್ದೇಶ ಈಡೇರಬೇಕು. ಸದನ ಆರಂಭವಾದ ನಂತರ ಎರಡು ದಿನ ಕಾದು ನೋಡಲಾಗುವುದು. ಈ ಭಾಗದ ಬಗ್ಗೆ ಚರ್ಚೆ ಮಾಡದಿದ್ದರೆ ಹುಬ್ಬಳ್ಳಿಗೆ ಆಗಮಿಸುವ ಸಚಿವರಿಗೆ, ಶಾಸಕರಿಗೆ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಬಾಬಜಾನ ಮುಧೋಳ, ಸಂಜು ದುಮಕನಾಳ, ಎಚ್.ಕೆ. ದೊಡ್ಡಮನಿ, ರವಿ ವಡ್ಡರ, ಸಂತೋಷ ಡೊಳ್ಳಿನ ಇತರರಿದ್ದರು.












Click it and Unblock the Notifications