ನೆನಪಿದಿಯಾ ಬೆಳಗಾವಿ ರೈಲಿನಲ್ಲಿ ಪ್ರಯಾಣಿಕರು ಅಸ್ವಸ್ಥರಾದ ಪ್ರಕರಣ? ಇದು ವಿಷಾಹಾರವಲ್ಲ ಚಾಕಲೇಟ್ ಗ್ಯಾಂಗ್ ಕೈಚಳಕ
ಬೆಳಗಾವಿಯಲ್ಲಿ ಕಳೆದ ದಿನವಷ್ಟೇ ರೈಲಿನಲ್ಲಿ ಕೆಲ ಪ್ರಯಾಣಿಕರು ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದ ಪ್ರಕರಣ ವರದಿಯಾಗಿತ್ತು. ಈ ಪ್ರಕರಣದ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. ರೈಲು ಪ್ರಯಾಣಿಕರು ಅಸ್ವಸ್ಥರಾಗುವ ಹಿಂದೆ ಚಾಕಲೇಟ್ ಗ್ಯಾಂಗ್ ಕೈವಾಡವಿದೆ ಎಂಬ ಮಾತು ಕೇಳಿ ಬಂದಿದೆ.
ಬೆಳಗಾವಿ ಗೋವಾ ರೈಲು ಪ್ರಯಾಣದ ವೇಳೆ ತಡರಾತ್ರಿ ಎಂಟು ಜನ ಅಸ್ವಸ್ಥಗೊಂಡಿದ್ದರು. ಈ ಎಂಟು ಜನ ಗೋವಾದಲ್ಲಿ ಊಟ ಸೇವನೆ ಬಳಿಕ ಅಸ್ವಸ್ಥರಾಗಿದ್ದರು. ತಕ್ಷಣ ಇವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇವರಲ್ಲಿ ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದು, ಇಬ್ಬರು ಯುವಕರು ತೀವ್ರ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರು ಉತ್ತರಪ್ರದೇಶ ಜಾನ್ಸಿ ಮೂಲದವರು ಎಂದು ಗುರುತಿಸಲಾಗಿದೆ. ಈ ಯುವಕರು ಉದ್ಯೋಗ ಅರಸಿ ಉತ್ತರಪ್ರದೇಶದಿಂದ ಗೋವಕ್ಕೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಲಸ ಮುಗಿದ ಬಳಿಕ ಮರಳಿ ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಗೋವಾದಿಂದ ತಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ಮರುಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಈ ದುರ್ಘಟನೆ ನಡೆದಿದೆ. ಇವರು ಅಸ್ವಸ್ಥಗೊಳ್ಳಲು ವಿಷಾಹಾರಾ ಸೇವನೆ ಕಾರಣ ಎಂದು ಶಂಕಿಸಲಾಗುತ್ತು. ಆದರೆ ವೈದ್ಯಕೀಯ ವರದಿಗಳು ಬೇರೆನೇ ಹೇಳುತ್ತಿವೆ.
ವೈದ್ಯರು ಹೇಳಿದ್ದೇನು?
ಇವರಿಗೆ ಫುಡ್ ಪಾಯಿಸನ್ ಆಗಿಲ್ಲ. ಮತ್ತು ಬರುವ ಚಾಕೊಲೇಟ್ ತಿಂದು ಅಸ್ವಸ್ಥರಾಗಿರಬಹುದು. ಯಾಕೆಂದರೆ ಈ ರೀತಿ ಲಕ್ಷಣಗಳು ಫುಡ್ ಪಾಯಿಸನ್ನಿಂದಾಗುವುದಿಲ್ಲ. ಕೆಮಿಕಲ್ ಮಿಶ್ರಿತ ಪದಾರ್ಥ ತಿಂದು ಇವರು ಅಸ್ವಸ್ಥರಾಗಿದ್ದಾರೆ ಎಂದು ಬಿಮ್ಸ್ ಆಸ್ಪತ್ರೆ ಸರ್ಜನ್ ಡಾ. ಅಣ್ಣಾಸಹೇಬ್ ಪಾಟೀಲ್ ಹೇಳಿದ್ದಾರೆ.
ಇದು ಚಾಕಲೇಟ್ ಗ್ಯಾಂಗ್ ಕೈಚಳಕ
ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣ ಮಾಡುವ ಈ ಚಾಕಲೇಟ್ ಗ್ಯಾಂಗ್ ಪ್ರಯಾಣಿಕರನ್ನು ಪರಿಚಯ ಮಾಡಿಕೊಳ್ಳುತ್ತದೆ. ಪರಿಚಯದ ಮೂಲಕ ಅವರ ಬಗ್ಗೆ ತಿಳಿದುಕೊಳ್ಳುತ್ತದೆ. ಬಳಿಕ ಅವರಿಗೆ ಚಾಕಲೇಟ್ ತಿನ್ನಲು ನೀಡಿ ಪ್ರಯಾಣಿಕರು ಪ್ರಜ್ಞೆ ತಪ್ಪಿದಾಗ ಅವರ ಬಳಿ ಇರುವ ಮೊಬೈಲ್, ಹಣ, ವಾಚ್, ಬಟ್ಟೆ ಕದ್ದೊಯುತ್ತಾರೆ.
ಮೂರು ವರ್ಷಗಳ ಹಿಂದೆ ಬೆಳಗಾವಿ ಪೊಲೀಸರ ಗಾಲಕ್ಕೆ ಬಿದ್ದಿದ್ದ ಈ ಗ್ಯಾಂಗ್ ನಂತೆ ಮತ್ತೊಂದು ಗ್ಯಾಂಗ್ ಹುಟ್ಟಿಕೊಂಡಿದೆ. ಬೆಳಗಾವಿ ಗೋವಾ ರೈಲಿನಲ್ಲಿ ಪ್ರಯಾಣಿಕರಿಗೆ ಇದೇ ರೀತಿ ವಂಚಿಸುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಇದೇ ರೀತಿಯ ಗ್ಯಾಂಗ್ವೊಂದು ಗೋವಾದಿಂದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮಕ್ಕೆ ಹೊರಟ್ಟಿದ್ದ ಎಂಟು ಜನ ಪ್ರಯಾಣಿಕರಿಗೆ ಯಾಮಾರಿಸಿದೆ. ನಾಲ್ಕು ಜನ ಕಳ್ಳರು ತಾವು ಮಧ್ಯಪ್ರದೇಶದವರೇ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಅವರಿಗೆ ಚಾಕಲೇಟ್, ಚಿಪ್ಸ್ ನೀಡಿ ಪ್ರಯಾಣಿಕರು ಪ್ರಜ್ಞೆ ತಪ್ಪಿದಾಗ ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದ್ದರು.
ಚಾಕಲೇಟ್ ಗ್ಯಾಂಗ್ಗಾಗಿ ಪೊಲೀಸ್ ಬಲೆ
ಸದ್ಯ ಚಾಕಲೇಟ್ ಗ್ಯಾಂಗ್ ಹೆಡೆಮುರಿಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ. ರೈಲು ನಿಲ್ದಾಣದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಪ್ರಯಾಣಿಕರು ಇದ್ದ ಬೋಗಿಗಳು ಮತ್ತು ಆ ಬೋಗಿಯಲ್ಲಿ ಕುಳಿತಿದ್ದ ಖದೀಮರನ್ನು ಪತ್ತೆ ಮಾಡಲಾಗುತ್ತಿದೆ. ಜೊತೆಗೆ ಹಿಂದೆ ಕಳ್ಳತನ ಮಾಡಿದ್ದ ಗ್ಯಾಂಗ್ ಹಾಗೂ ಈ ಗ್ಯಾಂಗ್ಗೂ ಸಂಬಂಧ ಇದಿಯಾ ಎನ್ನುವ ಬಗ್ಗೆ ಕೂಡ ಮಾಹಿತಿ ಕಲೆಹಾಕಲಾಗುತ್ತಿದೆ.











Click it and Unblock the Notifications