ನಿರ್ವಹಣೆ ಇಲ್ಲದೆ ಸೊರಗಿದ ಬೆಳಗಾವಿ ಸುವರ್ಣ ವಿಧಾನ ಸೌಧ
ಬೆಳಗಾವಿ, ಅಕ್ಟೋಬರ್ 17: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಐದು ವರ್ಷ ತುಂಬುತ್ತಿದೆ. ಆದರೆ ಇದರ ಅಂದ ಮಾತ್ರ ದಿನೇ ದಿನೇ ಹಾಳಾಗುತ್ತಿದೆ.
ಗುತ್ತಿಗೆದಾರರು ಮತ್ತು ಸರ್ಕಾರದ ಮಧ್ಯೆ ನಿರ್ಹವಣೆ ಹಣ ನೀಡುವ ವಿಚಾರದಲ್ಲಿ ಉಂಟಾದ ಗೊಂದಲದಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಶಕ್ತಿಸೌಧದಲ್ಲಿ ಸ್ವಚ್ಛತೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಗುತ್ತಿಗೆದಾರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕಾರ್ಮಿಕರು ಸೇವೆಯನ್ನ ಸ್ಥಗಿತಗೊಳಿಸಿದ್ದಾರೆ.

ಈ ಹಿಂದೆ ದಿನಕ್ಕೆ 100ಕ್ಕೂ ಅಧಿಕ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದರು. ಈಗ ಅವರೆಲ್ಲಾ ತಮ್ಮ ಕೆಲಸ ನಿಲ್ಲಿಸಿದ್ದು ಸುವರ್ಣ ಸೌಧದ ಒಳಾಂಗಣದಲ್ಲಿ ಎಲ್ಲಿ ನೋಡಿದರೂ ಗಬ್ಬೆದ್ದು ಹೋಗಿದೆ.
ಎಲ್ಲೆಂದರಲ್ಲಿ ಪಾರಿವಾಳಗಳ ಹಿಕ್ಕೆಗಳು ಬಿದ್ದಿವೆ. ಸಚಿವರು ಅಧಿಕಾರಿಗಳ ಕೊಠಡಿ ಬಳಿ ಸತ್ತು ಬಿದ್ದಿರುವ ಹುಳಗಳು, ಪಾರಿವಾಳಗಳು ಕಾಣಿಸುತ್ತವೆ.
ಇನ್ನು ಸುವರ್ಣ ಸೌಧದ ಒಳಾಂಗಣದ ಮೂಲೆ ಮೂಲೆಗಳಲ್ಲಿ ಹೆಜ್ಜೇನುಗಳು ಗೂಡು ಕಟ್ಟಿರುವ ದೃಶ್ಯಗಳೂ ಕಾಣುತ್ತಿವೆ.
ಮುಂದಿನ ತಿಂಗಳು ಬೆಳಗಾವಿ ಶಕ್ತಿ ಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಹೀಗಿದ್ದೂ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳದಿರುವುದು ಅಚ್ಚರಿಯನ್ನುಂಟು ಮಾಡಿದೆ.












Click it and Unblock the Notifications