ಹಲವು ಬಿಜೆಪಿ ನಾಯಕರ ಸೋಲಿಗೆ ವಿಜಯೇಂದ್ರ ಕಾರಣ: ಯತ್ನಾಳ್ ಹೊಸ ಬಾಂಬ್
ಸ್ವಪಕ್ಷೀಯರ ವಿರುದ್ಧವೇ ಹಲವು ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಪ್ರಮುಖ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮತ್ತೆ ಕಿಡಿ ಕಾರಿರುವ ಯತ್ನಾಳ್ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿ ಸೇರಿದಂತೆ ಹಲವು ಹಿರಿಯ ನಾಯಕರಿಗೆ ವಿಜಯೇಂದ್ರ ಕಾಟ ಕೊಟ್ಟಿದ್ದಾರೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಬೊಮ್ಮಾಯಿ ಮಾತ್ರವಲ್ಲದೆ ಹಲವು ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಹುನ್ನಾರ ನಡೆದಿದ್ದರು ಎಂದಿರುವ ಯತ್ನಾಳ್ ಅವರಿಂದ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಸಭೆಗೆ ಹೋಗಲ್ಲ ಎಂದ ಯತ್ನಾಳ್
ಬಿಜೆಪಿ ಶಾಸಕಾಂಗ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ, ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನ ಸಿಗುವವರೆಗೂ ನಾನು ಸಭೆಯಲ್ಲಿ ಪಾಲ್ಗೊಳ್ಳಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ ಯತ್ನಾಳ್, ಬೊಮ್ಮಾಯಿಗೆ ತೊಂದರೆ ಕೊಟ್ಟದ್ದು ಮಾತ್ರವಲ್ಲದೆ, ಸಂದೀಪ್ ಪಾಟೀಲ್ ಅವರನ್ನು ಮುಂದಿಟ್ಟುಕೊಂಡು ನನ್ನನ್ನು ಬಂಧಿಸಲು ಪ್ರಯತ್ನಿಸಲಾಗಿತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯ ಜಾಧವ್ ನಗರದಲ್ಲಿ ಪಂಚಮಸಾಲಿ ಸಮುದಾಯದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎದುರಿನಲ್ಲೇ ಬಿಜೆಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಬೊಮ್ಮಾಯಿಯವರನ್ನು ಸೋಲಿಸಲು ವಿಜಯೇಂದ್ರ ಹಣ ನೀಡಿದ್ದರು, ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಸಿದ್ದೇ ನಾನು, ಲಿಂಗಾಯತರನ್ನು ಕಳಿಸಿ ಸೋಮಣ್ಣರನ್ನು ಕೂಡ ಸೋಲಿಸಿದರು ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅಡ್ಜಸ್ಟ್ಮೆಂಟ್ ರಾಜಕಾರಣ
ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪಗಳ ಸರಣಿಯನ್ನು ಮುಂದುವರೆಸಿರುವ ಯತ್ನಾಳ್, ಬಿಎಸ್ವೈ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ.
ಬ್ಲಾಕ್ಮೇಲ್ ಮಾಡುವ ಮೂಲಕ ವಿಜಯೇಂದ್ರ ಅಧ್ಯಕ್ಷನಾಗಿದ್ದಾನೆ, ನಮ್ಮ ಪಕ್ಷದಲ್ಲಿ ಆತನನ್ನು ಯಾರೂ ಒಪ್ಪಿಲ್ಲ. ನಾವೆಲ್ಲಾ ಏನು ಅವನ ಗುಲಾಮರಾ? ಮೇಲಿನ ನಾಯಕರು ಯಾಕೆ ಹೆದರಿಕೊಂಡರು ಗಿತ್ತಿಲ್ಲ, ಸಿದ್ದರಾಮಯ್ಯಗೆ ಆತ ಬೆಂಬಲ ನೀಡಿದ್ದಾನೆ, ಕನಕಪುರದಲ್ಲಿ ಬಿಜೆಪಿ ಡೆಪಾಸಿಟ್ ಕಳೆದುಕೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವುದಕ್ಕೆ ಬಿಎಸ್ವೈ ವಿರೋಧಿಸಿದ್ದರು, ಅವರನ್ನು ನಮ್ಮ ಸಮಾಜ ಒಪ್ಪಲ್ಲ ಎಂದು ಯತ್ನಾಳ್ ಹೇಳಿಕೆ ನೀಡಿದ್ದು, ಡಿಸೆಂಬರ್ 13ರಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಭಾಗವಹಿಸುವುದಾಗಿ ಹೇಳಿದರು.
ಯತ್ನಾಳ್ ಅವರು ದಕ್ಷಿಣ ಭಾಗದ ಬಿಜೆಪಿ ನಾಯಕರ ಜೊತೆ ಕೂಡ ಅಷ್ಟೇನೂ ಆತ್ಮೀಯ ಸಂಬಂಧ ಹೊಂದಿಲ್ಲ. ಬಿಎಸ್ವೈ ವಿರುದ್ಧ ಮೊದಲಿನಿಂದ ಕೂಡ ನಾಲಿಗೆ ಹರಿಬಿಡುತ್ತಿದ್ದರೂ ಪಕ್ಷದ ನಾಯಕರು ಮಾತ್ರ ಯತ್ನಾಳ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿದ್ದಾರೆ.












Click it and Unblock the Notifications