ಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ : ಸಿಎಂ
Recommended Video
ಬೆಳಗಾವಿ, ನವೆಂಬರ್ 21 : ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ ಶ್ರೇಯ ಕುಮಾರಸ್ವಾಮಿಗೆ ಸಲ್ಲಬೇಕು, ಯಡಿಯೂರಪ್ಪ ಸಾರಾಯಿ ನಿಷೇಧವನ್ನು ವಿರೋಧಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಆರ್.ಬಿ.ತಿಮ್ಮಾಪುರ ಮಾತನಾಡಿ "ಮದ್ಯ ನಿಷೇಧ ಮಾಡುವ ಯೋಚನೆ ಸರ್ಕಾರಕ್ಕಿಲ್ಲ, ನಿಷೇಧದ ಊಹಾಪೋಹ ಹರಿದಾಡಿತ್ತಷ್ಟೆ ಎಂದರು.
ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಇಲ್ಲ: ಸಿದ್ದರಾಮಯ್ಯ
ಈ ಬಗ್ಗೆ ಸಿದ್ದರಾಮಯ್ಯ ಅವರು ಮದ್ಯ ನಿಷೇಧದ ಬಗ್ಗೆ 'ನ್ಯಾಷನಲ್ ಪಾಲಿಸಿ' ಮಾಡಲು ಹೇಳಿ ಆಗ ನಿಷೇಧ ಮಾಡುತ್ತೇವೆ, ಗಾಂಧಿ ಹುಟ್ಟಿದ ಗುಜರಾತ್ ನಲ್ಲಿಯೇ ಸಂಪೂರ್ಣ ಮದ್ಯ ನಿಷೇಧ ಮಾಡಿಲ್ಲ ಎಂದು ಬಿಜೆಪಿ ಅವರಿಗೆ ಟಾಂಗ್ ನೀಡಿದರು.
ಮದ್ಯ ನಿಷೇಧ : ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ, ಗದ್ದಲ
ಇದಕ್ಕೆ ಬಿಜೆಪಿಯ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಅವರುಗಳು ಮದ್ಯ ನಿಷೇಧ ಮಾಡಿ, ಬಿಹಾರದ ನಿತೀಶ್ ಕುಮಾರ್ ಗೆ ಸಾಧ್ಯವಾಗದ್ದು ನಿಮಗೇಕೆ ಸಾಧ್ಯವಾಗುವುದಿಲ್ಲ ಎಂದ ಒತ್ತಾಯಿಸಿದರು.
ಗದ್ದಲಕ್ಕೆ ಕಾರಣವಾದ ಸಿಎಂ ಮಾತು
ಯಡಿಯೂರಪ್ಪ ಅವರು ಸಾರಾಯಿ ನಿಷೇಧ ಮಾಡಿ ಮದ್ಯ ನಿಷೇಧಕ್ಕೆ ಮುನ್ನುಡಿ ಬರೆದಿದ್ದರು ಎಂದು ಬಿಜೆಪಿ ಸದಸ್ಯರು ಹೇಳಿದಾಗ ಮದ್ಯ ಪ್ರವೇಶ ಮಾಡಿದ ಮುಖ್ಯಮಂತ್ರಿಗಳು "ಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ, ಸಾರಾಯಿ ನಿಷೇಧದ ಬಗ್ಗೆ ಯಡಿಯೂರಪ್ಪ ಅವರ ವಿರೋಧವಿತ್ತು' ಎಂದರು ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಪ್ರಾರಂಭಿಸಿದರು.
ಸಿಎಂ ಮಾತನ್ನು ಕಡತದಿಂದ ತೆಗೆಯಲು ಒತ್ತಾಯ
ಪ್ರತಿಭಟನೆ ಜೋರು ಮಾಡಿದ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತನ್ನು ಕಡತದಿಂದ ತೆಗೆದುಹಾಕುವಂತೆ ಅವರು ಒತ್ತಾಯಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ನಂತರ ಕಲಾಪ ಆರಂಭವಾದಾಗಲೂ ಸಿದ್ದರಾಮಯ್ಯ ಅವರ ಮಾತನ್ನು ದಾಖಲೆಯಿಂದ ತೆಗೆಯುವಂತೆ ಜಗದೀಶ್ ಶೆಟ್ಟರ್ ಅವರು ಪಟ್ಟು ಹಿಡಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ರೆಕಾರ್ಡ್ ನಿಂದ ತೆಗೆದು ಹಾಕುವ ಪ್ರರ್ಶನೆಯೇ ಬರುವುದಿಲ್ಲ ಬೇಕಾದರೆ ರೂಲ್ಸ್ ಓದುತ್ತೀನಿ ಎಂದು ರೂಲ್ಸ್ ಓದಿದರು. ಇದಕ್ಕೂ ಸುಮ್ಮನಾಗದ ನಿಜೆಪಿ ಸದಸ್ಯರು 'ನಮಗೂ ರೂಲ್ಸ್ ಗೊತ್ತಿದೆ' ಎಂದು ಪ್ರತಿಭಟನೆ ಮುಂದುವರೆಸಿದರು.
ಉತ್ತರ ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲ : ಶೆಟ್ಟರ್ ಆರೋಪ
'ನಿಮ್ಮ ನಾಟಕ ಜನಕ್ಕೆ ಗೊತ್ತಿದೆ'
ಪ್ರತಿಭಟನೆಯಿಂದ ರೋಸಿಹೋದ ಮುಖ್ಯಮಂತ್ರಿಗಳು "ನಿಮಗೆ ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲ. ಕೇವಲ ಜಾರ್ಜ್ ರಾಜೀನಾಮೆ ಕೊಡಿ ಅಂತೀರಿ, ನಿಮಗೆ ಜನರ ಪರವಾದ ಕಾಳಜಿ ಇಲ್ಲ. ನೀವು ಎಷ್ಟೇ ನಾಟಕ ಆಡಿದ್ರೂ ಜನರಿಗೆ ಗೊತ್ತಾಗುತ್ತೆ ಜನ ನಿಮ್ಮನ್ನ ನಂಬಲ್ಲ' ಎಂದು ಮೂದಲಿಕೆಗಳ ಸುರಿಮಳೆ ಮಾಡಿದರು.
ನಗೆಗಡಲಲ್ಲಿ ತೇಲಿದ ಸದನ
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಿಕ್ಷಕರ ಕ್ಷೇತ್ರದ ನಾರಾಯಣಸ್ವಾಮಿಗೆ "ನಾರಾಯಣ ಸ್ವಾಮಿ ನೀನು ಟೀಚರ್ ಕ್ಷೇತ್ರದಿಂದ ಬಂದವನು, ನಿನಗೆ ಇದೆಲ್ಲ ಗೊತ್ತಾಗಲ್ಲ ಸುಮ್ನಿರಪ್ಪ ಎಂದು ಸದನವನ್ನು ನಗೆ ಗಡಲಲ್ಲಿ ತೇಲಿಸಿದರು ಸಿದ್ದರಾಮಯ್ಯ.
ಸಾರಾಯಿ ನಿಷೇಧ ಮಾಡಿದ್ದು ಯಡಿಯೂರಪ್ಪ ಅವರೇ
ಈ ನಡುವೆ ಸದನದ ಮೊಗಸಾಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ " ಸಾರಾಯಿ ನಿಷೇಧ ಕುರಿತು ಯಡಿಯೂರಪ್ಪನವರ ಬಗ್ಗೆ ಸಿಎಂ ಹೇಳಿಕೆ ಖಂಡನೀಯ, ಸಾರಾಯಿ ನಿಷೇಧ ಮಾಡಿ ಬಜೆಟಲ್ಲಿ ಘೋಷಿಸಿದ್ದು ಯಡಿಯೂರಪ್ಪನವರು, ಸಿದ್ದರಾಮಯ್ಯನವ್ರು ವಿಪಕ್ಷಗಳ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಸದನದಲ್ಲಿ ಹಗುರವಾಗಿ ಮಾತಾಡಿದ್ದು ಸರಿಯಲ್ಲ, ಇದೇ ಅವರ ಸಂಸ್ಕೃತಿ ಇರಬೇಕು, ಯಡಿಯೂರಪ್ಪನವರ ಬಗ್ಗೆ ಸಿಎಂ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಜಗದೀಶ್ ಶೆಟ್ಟರ್ ಆಗ್ರಹಿಸಿದರು.