ಸವದತ್ತಿಯಲ್ಲಿ ಹಾವುಗಳಿಗೆ ಸ್ವಂತ ಮನೆ ಬಿಟ್ಟ ಮಾಲೀಕ ಬಾಡಿಗೆ ಮನೆ ಪಾಲು!
Recommended Video
ಸವದತ್ತಿ (ಬೆಳಗಾವಿ), ಜೂನ್ 25: ಹಾವಿನ ಭಯದಿಂದ ಸ್ವಂತ ಮನೆಯನ್ನು ಬಿಟ್ಟವರ ವರದಿಗಳು ನೀವು ಕೇಳಿರಬಹುದು. ಮನೆಯೊಳಗೆ ಹುತ್ತ ಬೆಳೆದು, ಆ ನಂತರ ಹಾವುಗಳ ಓಡಾಟ ಕಂಡು, ಯಾಕಪ್ಪ ಸಹವಾಸ ಎಂದು ಸ್ವಂತ ಮನೆಯನ್ನು ಬಿಟ್ಟು, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದ ಸ್ಥಿತಿ ವಿವರಿಸುವ ವರದಿ ಇದು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲಕಿ ಗ್ರಾಮದಲ್ಲಿ ಭೀಮಪ್ಪ ತಳವಾರರ ಮನೆ ಈಗ ದೇವಸ್ಥಾನವಾದಂತೆ ಆಗಿದೆ. ಏಕೆಂದರೆ ಅವರ ಮನೆಯಲ್ಲಿ ಹುತ್ತ ಬೆಳೆದು, ಹಾವಿನ ಆವಾಸಸ್ಥಾನವಾಗಿದೆ. ಮೊದಮೊದಲಿಗೆ ಹೊತ್ತ ಬೆಳೆದಂತೆಯೂ ಅದನ್ನು ತೆರವು ಮಾಡಿದ್ದಾರೆ. ಆದರೆ ಎಷ್ಟು ಸಲ ತೆರವು ಮಾಡಿದರೂ ಮತ್ತೆ ಮತ್ತೆ ಹುತ್ತ ಬೆಳೆದು, ಹಾವುಗಳು ಬಂದು ನೆಲೆಸಿವೆ.
ಮದ್ದೂರಿನಲ್ಲಿ 70 ಲಕ್ಷದ ಎರಡಂತಸ್ತಿನ ಮನೆ ಮಾಲೀಕರಿಗೆ ಹುತ್ತದ್ದೇ ಕಾಟ
ಯಾವಾಗ ಮನೆಯೊಳಗೆ ಹಾವಿನ ಸಂಚಾರ ಶುರು ಆಯಿತೋ, ಆಗ ಗಾಬರಿ ಬಿದ್ದ ಈ ಕುಟುಂಬ ಸ್ವಂತ ಮನೆಯನ್ನೇ ಬಿಟ್ಟು, ಬಾಡಿಗೆ ಮನೆಗೆ ಸ್ಥಳಾಂತರ ಆಗಿದೆ. ಅಂದಹಾಗೆ ಮನೆಯೊಳಗೆ ನಾಲ್ಕು ಅಡಿ ಎತ್ತರಕ್ಕೆ ಹುತ್ತ ಬೆಳೆದು ನಿಂತಿದ್ದು, ನಿತ್ಯವೂ ಗ್ರಾಮಸ್ಥರು ಹಾಗೂ ಭೀಮಪ್ಪ ತಳವಾರರ ಕುಟುಂಬದವರು ಶ್ರದ್ಧಾ- ಭಕ್ತಿಯಿಂದ ಹುತ್ತಕ್ಕೆ ಪೂಜೆ ಮಾಡುತ್ತಿದ್ದಾರೆ.
ಈ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಿದಿರಹೊಸಹಳ್ಳಿಯ ಮಹೇಶ್ ಎಂಬುವವರು ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ಕಟ್ಟಿಸಿದ್ದ ಎರಡಂತಸ್ತಿನ ಮನೆಯಲ್ಲೂ ಪದೇ ಪದೇ ಹುತ್ತ ತಲೆ ಎತ್ತಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲೇ ವರದಿ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.