ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ಬೆಳಗಾವಿ, ನವೆಂಬರ್ 25: ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ಬಳಿ ನಡೆದಿದೆ. ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುಂಡಯ್ಯ ರಾಚಯ್ಯ ಕಮತೆ (42) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಹುಕ್ಕೇರಿಯ ಸಂಕೇಶ್ವರ ಗ್ರಾಮಕ್ಕೆ ತೆರಳಿದ್ದ ದುಂಡಯ್ಯ ರಾಚಯ್ಯ ಕಮತೆ ಅಲ್ಲಿಂದ ತಮ್ಮ ಊರು ನಿಡಸೋಸಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದಿದ್ದಾರೆ. ತಮ್ಮ ಸ್ವಗ್ರಾಮ ನಿಡಸೋಸಿ ನಿಲ್ದಾಣ ಬಂದಾಗ ಇಳಿಯುವಾಗ ದುಂಡಯ್ಯ ರಾಚಯ್ಯ ಕಮತೆ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಕೆಎಸ್ಆರ್ಟಿಸಿ ಬಸ್ನ ಹಿಂಭಾಗದ ಚಕ್ರಕ್ಕೆ ದುಂಡಯ್ಯ ರಾಚಯ್ಯ ಕಮತೆ ತಲೆ ಸಿಲುಕು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್- ಲಾರಿ ಮುಖಾಮುಖಿ ಡಿಕ್ಕಿ
ಚಿಕ್ಕಮಗಳೂರು, ನವೆಂಬರ್ 25: ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಗ್ಗನಾಳ ಬಳಿ ನಡೆದಿದೆ. ಹೊರನಾಡಿನಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಸರ್ಕಾರಿ ಬಸ್, ಬಾಳೆಹೊನ್ನೂರಿನಿಂದ ಕಳಸಕ್ಕೆ ತೆರಳುತ್ತಿದ್ದ ಲಾರಿಗೆ ಕಗ್ಗನಾಳದ ಕಿರುಸೇತುವೆ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇನ್ನು ಕಗ್ಗನಾಳದ ಕಿರುಸೇತುವೆ ಬಳಿ ಅಪಘಾತ ಸಂಭವಿಸಿದ ಕಾರಣ ಈ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾರು ಪಲ್ಟಿ: ಆರು ವಿದ್ಯಾರ್ಥಿಗಳಿಗೆ ಗಾಯ
ಧಾರವಾಡ: ಕಾರು ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ -ಬೆಳಹಾರ್ ಗ್ರಾಮಗಳ ಬಳಿ ನಡೆದಿದೆ.

ಚಿಲಕವಾಡ ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರವಾದರೂ ಹೆಚ್ಚುವರಿ ತರಗತಿಗಳು ನಡೆಸಲಾಗಿತ್ತು. ಕ್ಲಾಸ್ ಮುಗಿದ ನಂತರ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ನಿಂತಾಗ, ನವಲಗುಂದದಿಂದ ನಾಗರಳ್ಳಿಯತ್ತ ಹೊರಟಿದ್ದ ಕಾರಿಗೆ ಕೈ ಮಾಡಿ ಲಿಫ್ಟ್ ಕೇಳಿದ್ದಾರೆ. ಆರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತಿಸಿಕೊಂಡ ಕಾರು ಚೀಲಕವಾಡ- ಬೆಳಹಾರ್ ಗ್ರಾಮಗಳ ಮದ್ಯ ರಸ್ತೆಯಲ್ಲಿ ಕೆಲವೇ ನಿಮಿಷಗಳಲ್ಲಿ ಪಲ್ಟಿಯಾಗಿದೆ.
ಕೂಡಲೇ ಸ್ಥಳೀಯರು ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ 5 ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಾರು ಚಾಲಕ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತದ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಒಟ್ಟು 6 ವಿದ್ಯಾರ್ಥಿಗಳು ನಾಗರಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.












Click it and Unblock the Notifications