"ಮಹಾ" ಮಳೆಗೆ ಬೆಳಗಾವಿಯಲ್ಲಿ ಬ್ಯಾರೇಜ್ ಮುಳುಗಡೆ; ಪ್ರವಾಹ ಭೀತಿ
ಬೆಳಗಾವಿ, ಜೂನ್ 19: ಬೆಳಗಾವಿ ಜಿಲ್ಲೆಯ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳ ಒಳಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹ ಭೀತಿ ಆವರಿಸಿದೆ.
Recommended Video
ನದಿ ನೀರಿನ ಮಟ್ಟದ ಏರಿಕೆಯಿಂದಾಗಿ ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ, ಚಿಕ್ಕೋಡಿಯ ಕಲ್ಲೋಳ ಯಡೂರ ಬ್ಯಾರೇಜ್ ಗಳು ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಆರು ಬ್ಯಾರೇಜ್ ಗಳು ಮುಳುಗಡೆಯಾಗಿವೆ. ಮಳೆ ಹೀಗೇ ಮುಂದುವರೆದರೆ ಪ್ರವಾಹ ಎದುರಾಗುವ ಆತಂಕವೂ ನದಿ ಪಾತ್ರದ ಭಾಗದ ಜನರಲ್ಲಿ ತುಂಬಿದೆ.
ಕರಾವಳಿಯಲ್ಲಿ ಜೂ. 23ರವರೆಗೆ ಭಾರೀ ಮಳೆ ಸಾಧ್ಯತೆ
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ 39,375 ಕ್ಯುಸೆಕ್ ಹಾಗೂ ದೂಧ್ ಗಂಗಾ ನದಿಯ ಮೂಲಕ 15,900 ಕ್ಯುಸೆಕ್ ಸೇರಿದಂತೆ ಒಟ್ಟು 55,275 ಕ್ಯುಸೆಕ್ ನೀರು ಚಿಕ್ಕೊಡಿ ಬಳಿಯ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಸೇರಿಕೊಳ್ಳುತ್ತದೆ. ಹೀಗಾಗಿ ಪ್ರವಾಹದ ಆತಂಕ ಇದ್ದೇ ಇದೆ. ಕೃಷ್ಣಾ ನದಿಯ ಪ್ರಮುಖ ಜಲಾಶಯ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ.
ಬೆಳಗಾವಿಯ ಚಿಕ್ಕೋಡಿಯಲ್ಲಿ 32.2 ಸೆಂ.ಮೀ, ರಾಯಬಾಗದಲ್ಲಿ 16.0 ಸೆಂ.ಮೀ, ಅಥಣಿಯಲ್ಲಿ 5.0 ಸೆಂ.ಮೀ ಮಳೆಯಾಗಿರುವುದು ನದಿ ನೀರಿನ ಮಟ್ಟ ಹೆಚ್ಚಲು ಕಾರಣವಾಗಿದೆ.