ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಅನುಮತಿ
ಬೆಳಗಾವಿ, ಸೆಪ್ಟೆಂಬರ್ 9: ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ. ಈ ಬಗ್ಗೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾತನಾಡಿದ್ದು, ಬೆಳಗಾವಿ ಗಣೇಶೋತ್ಸವಕ್ಕೆ ಮುಖ್ಯಮಂತ್ರಿ ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ವಿಜೃಂಭಣೆಯ ಗಣೇಶೋತ್ಸವ ಆಚರಿಸಲಾಗುತ್ತದೆ. ಸಿಎಂರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ, ಅನುಮತಿ ನೀಡಿದ್ದಾರೆ. ಇನ್ನೇನು ಅಧಿಕೃತ ಆದೇಶವನ್ನು ಜಿಲ್ಲಾಡಳಿತದ ಕಡೆಯಿಂದ ಬಿಡುಗಡೆ ಮಾಡಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಮಣಿದ ಬಿಬಿಎಂಪಿ
ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಣಿದಿದೆ. ಹೆಚ್ಚಿನ ಬೇಡಿಕೆ ಬಂದಲ್ಲಿ ಒಂದು ವಾರ್ಡ್ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ವಿಶೇಷ ಆಯುಕ್ತರ ಮಾತಿಗೆ ಒಪ್ಪಿದ ಗಣೇಶ ಉತ್ಸವ ಸಮಿತಿ, ಗಣೇಶ ಮೂರ್ತಿ ತಯಾರಕರ ಧರಣಿಯನ್ನು ಹಿಂಪಡೆದಿದ್ದಾರೆ. 3 ದಿನದ ಆಚರಣೆಯ ನಿಯಮವನ್ನೂ ಬಿಬಿಎಂಪಿ ಹಿಂಪಡೆದಿದೆ ಎಂದು ತಿಳಿದುಬಂದಿದ್ದು, ಆದರೆ ಈ ಕುರಿತು ಅಧಿಕೃತ ಆದೇಶ ಇನ್ನೂ ಬಿಡುಗಡೆಯಾಗಿಲ್ಲ.
ಈ ಕುರಿತು ಮಾತನಾಡಿರುವ ಬೆಂಗಳೂರು ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜ್, ಯಾವುದೇ ಸರ್ಕಾರ ಧಾರ್ಮಿಕ ವಿಚಾರಕ್ಕೆ ತಲೆ ಹಾಕಬಾರದು ಎಂಬ ವಿಷಯಕ್ಕೆ ಜಯ ಸಿಕ್ಕಿದೆ. ಗಣಪತಿ ಮೂರ್ತಿ ಎತ್ತರದ ಬಗ್ಗೆ ಕೂಡ ಬಿಬಿಎಂಪಿ ನಿಯಮ ಹಿಂಪಡೆದಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಅವಕಾಶ ಕೊಟ್ಟಿದೆ ಎಂದರು.
ಗಣೇಶ ಹಬ್ಬ ಆಚರಿಸಲು ಚೌತಿಯಿಂದ ಚರ್ತುದರ್ಶಿವರೆಗೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಾ ರೀತಿಯ ಅನುಕೂಲ ಮಾಡಿಕೊಳ್ಳುತ್ತೇವೆ ಹಾಗೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ವಾರ್ಡ್ನಲ್ಲಿ ಎಲ್ಲಾ ಸಮಿತಿಗೂ ಗಣೇಶ ಕೂರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಪ್ರತಿಭಟನೆ
ಇದಕ್ಕೂ ಮುನ್ನ ಬೆಂಗಳೂರಿನ ಬಿಬಿಎಂಪಿ ಮುಖ್ಯ ಕಚೇರಿಗೆ 5 ಅಡಿಗಿಂತ ದೊಡ್ಡದಾದ ಗಣೇಶ ಮೂರ್ತಿಗಳನ್ನು ತಂದ ಗಣೇಶ ಮೂರ್ತಿ ತಯಾರಕರು ಕಚೇರಿಯಲ್ಲಿಯೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ ಬಿಬಿಎಂಪಿ ಕಮಿಷನರ್ ಸ್ಥಳಕ್ಕೆ ಆಗಮಿಸಿ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು. ಇಲ್ಲದೇ ಹೋದರೆ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಗಣೇಶೋತ್ಸವ ಸಮಿತಿಗಳು ಒಟ್ಟಾಗಿ ಪ್ರತಿಭಟನೆ ನಡೆಸಿದ್ದವು. ಜತೆಗೆ ಗಣೇಶ ಹಬ್ಬಕ್ಕೆ ಬಿಬಿಎಂಪಿ ರೂಪಿಸಿದ ನಿಯಮಗಳನ್ನು ಧಿಕ್ಕರಿಸುವುದಾಗಿ ಘೋಷಿಸಿದ್ದವು.
ರಾಜ್ಯ ಸರ್ಕಾರದ ಗೈಡ್ಲೈನ್ಸ್ ವಿರೋಧಿಸಿ ಗಣೇಶೋತ್ಸವ ಸಮೀತಿಗಳು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಪಟಾಕಿ ಹೊಡೆದು ಪ್ರತಿಭಟನೆ ನಡೆಸಿದವು. 10- 15 ಅಡಿ ಗಣೇಶ ಮೂರ್ತಿಗಳನ್ನು ಸಹ ಬಿಬಿಎಂಪಿ ಕಚೇರಿ ಬಳಿ ತಂದು ಈಗಾಗಲೇ ರೂಪಿಸಿರುವ ನಿಯಮಗಳನ್ನು ಹಿಂಪಡೆಯಲು ಒತ್ತಾಯಿಸಲಾಗಿತ್ತು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಬೆನ್ನಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿಯಮ ಸಡಿಲಿಕೆ ವಿಚಾರವಾಗಿ ಗುರುವಾರ ಸಂಜೆಯೊಳಗೆ ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸಚಿವರು ಹಾಗೂ ಬಿಬಿಎಂಪಿ ಕಮೀಷನರ್, ಪೊಲೀಸ್ ಆಯುಕ್ತ ಜತೆ ಚರ್ಚಿಸುತ್ತೇನೆ. ಕೆಲವು ಜಿಲ್ಲೆಗಳಿಂದಲೂ ಗಣೇಶೋತ್ಸವ ಕುರಿತು ವಿವಿಧ ಬೇಡಿಕೆ ಬರುತ್ತದೆ. ಈ ಕುರಿತು ಸಂಜೆಯ ಒಳಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಸಿಎಂ ತಿಳಿಸಿದರು.












Click it and Unblock the Notifications