ಬೆಂಗಳೂರು ಜೈಲಲ್ಲಿ ಶಶಿಯನ್ನು ಭೇಟಿ ಮಾಡಿದ ದಿನಕರನ್
Recommended Video
ಬೆಂಗಳೂರು, ಡಿಸೆಂಬರ್ 28 : ಚೆನ್ನೈನ ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಟಿಟಿವಿ ದಿನಕರನ್ ಅವರು ಗುರುವಾರ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಶಶಿಕಲಾ ನಟರಾಜನ್ ಅವರಿಗೆ ಸೇರಿದ ಆಸ್ತಿಯ ಮೇಲೆ ಬುಧವಾರ ಮತ್ತೊಮ್ಮೆ ಆದಾಯ ತೆರಿಗೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಈ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.
ಆರ್ ಕೆ ನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರನ್ ಅವರು, ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷದ ಅಭ್ಯರ್ಥಿಗಳನ್ನು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಜಯಶಾಲಿಯಾಗುತ್ತಿದ್ದಂತೆ ಇನ್ನೆರಡು ತಿಂಗಳಲ್ಲಿ ತಮಿಳುನಾಡಿನ ಸರಕಾರವೇ ಪತನವಾಗಲಿದೆ ಎಂದು ಅಬ್ಬರಿಸಿದ್ದರು.
ಮನ್ನಾರ್ ಗುಡಿ ಕುಟುಂಬಕ್ಕೆ ಸೇರಿದ ಆಸ್ತಿಯ ಮೇಲೆ, ಆರು ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿಯೇ ಮನ್ನಾರ್ ಗುಡಿ ಕುಟುಂಬಕ್ಕೆ ಸೇರಿದ ದಿನಕರನ್ ಅವರು ಶಶಿಕಲಾರನ್ನು ಭೇಟಿ ಮಾಡಿದ್ದಾರೆ.
ಸರಕಾರವನ್ನೇ ಪತನ ಮಾಡುತ್ತೇನೆ ಎಂದು ದಿನಕರನ್ ಅಬ್ಬರಿಸಿದ ನಂತರ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಉನ್ನತ ಅಧಿಕಾರಿಗಳ ಸಭೆ ಕರೆದಿದ್ದರು. ಇದರ ಹಿಂದೆಯೇ ದಿನಕರನ್ ಅವರ ಬಂಧನವಾಗಲಿದೆ ಎಂಬ ಸುದ್ದಿಯೂ ತೇಲಿಬಂದಿತ್ತು.