ಕಳ್ಳತನ: ಐಟಿ ಕಂಪೆನಿ ಮಹಿಳಾ ಉದ್ಯೋಗಿ ಬಂಧನ

ಆತ್ಮೀಯ ಸ್ನೇಹಿತೆ ಮನೆಯಲ್ಲೇ ಚಿನ್ನಾಭರಣ ಕದಿಯುತ್ತಿದ್ದ ಗೋವಿಂದಪುರ ನಿವಾಸಿ ಎಲಿಜಬೆತ್ ಉರುಫ್ ಮೇರಿ (23) ಬಂಧಿತ ಉದ್ಯೋಗಿ. ಈಕೆಯಿಂದ 4.5 ಲಕ್ಷ ರೂ. ಮೌಲ್ಯದ 210 ಗ್ರಾಂ ತೂಕದ ಚಿನ್ನಾಭರಣವನ್ನು ಹೆಣ್ಣೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಿಯುಸಿಯಲ್ಲಿ ಸಹಪಾಠಿಯಾಗಿದ್ದ ಬಿಡಿಎಸ್ ಗಾರ್ಡನ್ ನಿವಾಸಿ ಪೂಜಾ ಶರ್ಮಾ ಮನೆಗೆ ಆಗಾಗ್ಗೆ ಎಲಿಜಬೆತ್ ಬರುತ್ತಿದ್ದಳು. ಈ ಸಂದರ್ಭದಲ್ಲಿ ಪೂಜಾ ಶರ್ಮಾ ತನ್ನ ಆತ್ಮೀಯ ಸ್ನೇಹಿತೆಯಾದ ಎಲಿಜಬೆತ್ ಜೊತೆ ಮನೆಯ ಚಿನ್ನಾಭರಣದ ಮಾಹಿತಿಯನ್ನು ಹೇಳಿದ್ದರು. ಪೂಜಾ ಶರ್ಮ ಮನೆಯಲ್ಲಿ ಬಂಗಾರವಿದೆ ಎಂದು ತಿಳಿದು ಗೆಳತಿಯ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎಲಿಜಬೆತ್ ಕಳೆದ ಆರು ತಿಂಗಳಿಂದ ಅವರ ಮನೆಗೆ ಬಂದಾಗಲೆಲ್ಲಾ ಚಿನ್ನದ ಸರ, ಬಳೆ ಹೀಗೆ ಒಂದೊಂದೇ ಆಭರಣ ಕಳವು ಮಾಡುತ್ತಿದ್ದಳು.
ಮನೆಯಲ್ಲಿ ಇದ್ದಕ್ಕಿದಂತೆ ಚಿನ್ನದ ಆಭರಣಗಳು ನಾಪತ್ತೆಯಾಗುತ್ತಿರುವ ಆತಂಕಗೊಂಡ ಪೂಜಾ ಕುಟುಂಬ ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಈ ಸಂಬಂಧ ಪೂಜಾ ಸಹೋದರಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಪೊಲೀಸರು ಕೆಲಸದರನ್ನು ವಿಚಾರಿಸಿದರೂ ಕಳ್ಳತನದ ಮಾಹಿತಿ ಸಿಕ್ಕಿರಲಿಲ್ಲ. ನಂತರ ಪೂಜಾ ಮನೆಗೆ ಆಗಾಗ ಬಂದು ಹೋಗುತ್ತಿರುವ ಪರಿಚಯಸ್ಥರ ಮಾಹಿತಿ ಸಂಗ್ರಹಿಸಿದಾಗ ಎಲಿಜಬೆತ್ ಬಂದು ಹೋಗುತ್ತಿರುವ ಮಾಹಿತಿ ಗೊತ್ತಾಗಿದೆ.
ಸಿಕ್ಕಿದ್ದು ಹೇಗೆ?
ಎಲಿಜಬೆತ್ ಬಗ್ಗೆ ಸಂಶಯ ಬಂದರೂ ಅವಳೇ ಕಳ್ಳತನ ಮಾಡುತ್ತಿದ್ದಾಳೆ ಎಂಬುದನ್ನು ಪತ್ತೆ ಮಾಡಲು ಎಲಿಜಬೆತ್ಳನ್ನು ಪೂಜಾ ಆಹ್ವಾನಿಸಿದ್ದರು. ಮೊದಲೇ ಟೇಬಲ್ ಮೇಲೆ ಮೂರು ಉಂಗುರವನ್ನು ಇಟ್ಟಿದ್ದರು. ನೀರು ತರುವ ನೆಪದಲ್ಲಿ ಆಡುಗೆ ಕೋಣೆಗೆ ಹೋಗಿ ಬರುವಷ್ಟರಲ್ಲಿ ಟೇಬಲ್ ಮೆಲಿದ್ದ ಉಂಗುರುಗಳು ನಾಪತ್ತೆಯಾಗಿದ್ದವು. ಎಲಿಜಬೆತ್ ಕದ್ದು ಸ್ವಲ್ಪ ಸಮಯದ ಬಳಿಕ ಹೊರಟು ಹೋಗಿದ್ದಳು. ಪೂಜಾ ಶರ್ಮ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಹಿಳಾ ಸಿಬ್ಬಂದಿಗಳು ಎಲಿಜಬೆತ್ ಮನೆಯವರೆಗೆ ಹಿಂಬಾಲಿಸಿ ತಪಾಸಣೆ ಮಾಡಿದಾಗ ಕಂಚುಕ(ಬ್ರಾ)ದೊಳಗೆ ಮೂರು ಉಂಗರುಗಳು ಪತ್ತೆಯಾದವು.
ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಈಕೆ, ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಒಂದು ವರ್ಷದಿಂದ ಮಾರತ್ಹಳ್ಳಿಯ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಕುಟುಂಬದಲ್ಲಿ ಆರ್ಥಿಕ ಸಮಸ್ಯೆವಿದ್ದರೂ ಐಷಾರಾಮಿ ಜೀವನಕ್ಕೆ ಆಕೆ ಆಕರ್ಷಿತಳಾಗಿ ಈ ಕಳ್ಳತನ ಮಾಡುತ್ತಿದ್ದಳು. ಕದ್ದ ಆಭರಣಗಳನ್ನು ಮಾರಿ ಕಾರು ಹಾಗೂ 60 ಸಾವಿರ ಮೌಲ್ಯದ ಮೊಬೈಲ್ನ್ನು ಖರೀದಿಸಿದ್ದಳು.












Click it and Unblock the Notifications