ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಗೌಡ ಹೇಳಿದ್ದು ಹೀಗೆ
Recommended Video
ನವೆಂಬರ್ 10, ಬೆಂಗಳೂರು: 'ಪ್ರಜ್ವಲ್ ರೇವಣ್ಣ ಚುನಾವಣೆಗೆ ನಿಂತರೆ ಬಹಳ ಸಂತೋಷ, ಆತನ ಪರವಾಗಿ ನಾನು ಪ್ರಚಾರ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಮಗ ನಿಖಿಲ್ ಗೌಡ ಅವರು ಹೇಳಿದ್ದಾರೆ.
ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ದೇವೇಗೌಡ್ರ ಮನೆಯಿಂದ ದಿನಕ್ಕೊಂದು ಮಾತು
ಪ್ರಜ್ವಲ್ ರೇವಣ್ಣ ಟಿಕೆಟ್ ನೀಡುವ ಕುರಿತು ಕೆಲವು ದಿನಗಳಿಂದ ಬಿಸಿ-ಬಿಸಿ ಚರ್ಚೆ ಏರ್ಪಟ್ಟಿದ್ದು, ಪ್ರಜ್ವಲ್ ಅವರು ನಿಖಿಲ್ ಅವರ ಸ್ನೇಹಿತ ಮಹಾಭಾರತ ಚಿತ್ರದ ನಿರ್ಮಾಪಕ ಮುನಿರತ್ನ ಅವರ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಹಾಗಾಗಿ ಅವರಿಬ್ಬರ ನಡುವೆ ಮನಸ್ಥಾಪ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು.
ಆದರೆ ಅದನ್ನು ಅಲ್ಲಗಳೆದಿರುವ ನಿಖಿಲ್ ಗೌಡ ಪ್ರಜ್ವಲ್ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವೇ ಆಗಿಲ್ಲ. ಹಾಗೂ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ಥಾಪ ಇಲ್ಲ ವದಂತಿಗಳಿಗೆ ಕವಿಗೊಡಬೇಡಿ ಎಂದು ಹೇಳಿದ್ದಾರೆ.
ದೇವೇಗೌಡ ಕುಟುಂಬದ ಎಲ್ಲ ಸದಸ್ಯರೂ ಅನ್ಯೋನ್ಯತೆಯಿಂದ ಇದ್ದೇವೆ ಎಂದಿರುವ ನಿಖಿಲ್ ಗೌಡ, ಈ ರೀತಿಯ ಸುಳ್ಳು ಸುದ್ದಿ ಯಾರು ಹಬ್ಬಿಸುತ್ತಿದ್ದಾರೊ ತಿಳಿಯದು ಆದರೆ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದರ ಹಿಂದೆ ರಾಜಕೀಯ ದುರುದ್ದೇಶ ಇದ್ದಂತೆ ಕಾಣುತ್ತದೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ತೀರ್ಮಾನವಾಗಿಲ್ಲ: ದೇವೇಗೌಡ
ದೇವೇಗೌಡ, ಕುಮಾರಸ್ವಾಮಿ ನಿರ್ಣಯ ಅಂತಿಮ
ಪಕ್ಷದ ಹಿರಿಯರಾದ ದೇವೇಗೌಡ, ಕುಮಾರಸ್ವಾಮಿ ಅವರು ಹೇಳಿದವರಿಗೆ ಮಾತ್ರವೇ ಟಿಕೆಟ್ ನೀಡಲಾಗುತ್ತದೆ. ಕುಟುಂಬದ ಯಾವ ಸದಸ್ಯರೂ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ. ಅದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ನಿಖಿಲ್ ಗೌಡ ಹೇಳಿದ್ದಾರೆ. ಆ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಇನ್ನೂ ಟಿಕೆಟ್ ನೀಡಲಾಗಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಸಿನಿಮಾದಿಂದ ಬಿಡುವು
ಪ್ರಸ್ತುತ ಮಹಾಭಾರತ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇರುವ ನಿಖಿಲ್ ಗೌಡ ಇನ್ನು ಒಂದು ವಾರದಲ್ಲಿ ಪಕ್ಷದ ಪರ ಸ್ಟಾರ್ ಪ್ರಚಾರಕರಾಗಿ ತೆರಳಲಿದ್ದಾರಂತೆ. ಚುನಾವಣೆ ಮುಗಿಯುವವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಚಿತ್ರರಂಗದಲ್ಲಿ ಚೆನ್ನಾಗಿದ್ದೇನೆ.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಮೊದಲ ಚಿತ್ರ ಜಾಗ್ವಾರ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದೀಗ ಮಹಾಭಾರತ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸುತ್ತಿದ್ದೇನೆ, ಸಿನಿಮಾರಂಗದಲ್ಲಿ ನೆಮ್ಮದಿಯಿಂದ ಇದ್ದೇನೆ ರಾಜಕೀಯ ನನಗೆ ಬೇಡ ಎಂದು ನಿಖಿಲ್ ಗೌಡ ಹೇಳಿದ್ದಾರೆ.
ನಿಖಿಲ್ ಗೌಡ ಭರವಸೆಯ ನುಡಿ
ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದ 20 ತಿಂಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಗಳಿಗೆ ಅರಿವಿದೆ. ಜನರು ಖಂಡಿತವಾಗಿಯೂ ಕುಮಾರಸ್ವಾಮಿ ಅವರ ಕೈಹಿಡಿಯಲಿದ್ದಾರೆ. ಮತ್ತೆ ಅವರೇ ಮುಖ್ಯಮಂತ್ರಿ ಆಗಿಯೇ ಆಗಲಿದ್ದಾರೆ ಎಂದು ನಿಖಿಲ್ ಗೌಡ ಭರವಸೆಯ ಮಾತನಾಡಿದ್ದಾರೆ.