ಬೆಂಗಳೂರು ವಿವಿ ವಿಭಜನೆಗೆ ಸಿದ್ದು ಸಂಪುಟ ಅಸ್ತು!
ಬೆಂಗಳೂರು, ಜ.22: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯವನ್ನು ವಿಭಜಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಅಸ್ತು ಎಂದಿದೆ.
ಬುಧವಾರ ನಡೆದ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ, ಇದರಿಂದ ಸುಮಾರು ಐದು ಜಿಲ್ಲೆಗಳಲ್ಲಿರುವ 750ಕ್ಕೂ ಅಧಿಕ ಪದವಿ ಕಾಲೇಜುಗಳು ಪ್ರತ್ಯೇಕಗೊಳ್ಳಲಿದೆ. ಸುಮಾರು 3.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕಾಲದಲ್ಲಿ ಎನ್ ರುದ್ರಯ್ಯ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಈ ವಿಭಜನೆ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು.250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಶಿಫಾರಸು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಹೊಸಕೋಟೆ ಸಮೀಪ ಒಂದು ವಿಶ್ವ ವಿದ್ಯಾಲಯ, ಬಿಬಿಎಂಪಿ ವ್ಯಾಪ್ತಿಗೆ ಮತ್ತೊಂದು ಎಂದು ಯೋಜಿಸಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಶ್ವ ವಿದ್ಯಾಲಯ ಎಂದು ಹೆಸರಿಸುವ ಸಾಧ್ಯತೆಯಿತ್ತು. ಈಗ ಬೆಂಗಳೂರು ಉತ್ತರ ಬದಲು ಡಿವಿ ಗುಂಡಪ್ಪ ವಿಶ್ವ ವಿದ್ಯಾಲಯ ಎಂದು ಹೆಸರಿಸಲು ನಿರ್ಧರಿಸಲಾಗಿದೆ.












Click it and Unblock the Notifications