ಲೋಕಾಯುಕ್ತ ಕೇಸ್: ಬ್ರೋಕರ್ಸ್ ಬಳಸಿ ಬೆದರಿಕೆ ಕರೆ!
ಬೆಂಗಳೂರು, ಸೆ. 25: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆ ಮುಂದುವರೆಯುತ್ತಿದ್ದಂತೆ ಅನೇಕ ಸತ್ಯಗಳು ಹೊರ ಬೀಳುತ್ತಿವೆ. ಪ್ರಕರಣದಲ್ಲಿ ಪ್ರಮುಖ ಅಂಶವಾಗಿರುವ ಬೆದರಿಕೆ ಕರೆಗಳನ್ನು ಮಾಡಲು ಬ್ರೋಕರ್ ಗಳನ್ನು ಆರೋಪಿಗಳು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಎಸ್ ಐಟಿ ತನ್ನ ತನಿಖೆಯಲ್ಲಿ ಭಾಸ್ಕರ್ ವಿ ಹಾಗೂ ಅಶೋಕ್ ರನ್ನು ಬ್ರೋಕರ್ಸ್ ಎಂದು ಹೆಸರಿಸಿದೆ. ಇವರಿಬ್ಬರು ಅಧಿಕಾರಿಗಳನ್ನು ಈ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. ನಂತರ ಈ ಬೆದರಿಕೆ ಡೀಲ್ ಕುದುರಿಸಿದ್ದಕ್ಕೆ ಆರೋಪಿಯಿಂದ 20 ಲಕ್ಷ ರು ಬೇಡಿಕೆ ಬರುತ್ತಿತ್ತು ಎಂದು ಎಸ್ ಐಟಿ ಹೇಳಿದೆ. [ಚನ್ನಬಸಪ್ಪ ಕೇಸ್ ಚಾರ್ಜ್ಶೀಟ್ ವಿವರ]

ಎಸ್ ಐಟಿ ಸಲ್ಲಿಸಿರುವ ಎರಡನೇ ಚಾರ್ಜ್ ಶೀಟ್ ನಲ್ಲಿ ಲೋಕಾಯುಕ್ತ ಭಾಸ್ಕರ್ ರಾವ್ ಅವರ ಮಗ ಅಶ್ವಿನ್ ಅವರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದ್ದು, 1,530 ಪುಟಗಳ ಚಾರ್ಜ್ ಶೀಟ್ ನಲ್ಲಿ ಲೋಕಾಯುಕ್ತ ಪಿಆರ್ ಒ ಸೈಯದ್ ರಿಯಾಜ್ ಹೆಸರು ಕೂಡಾ ಇದೆ.
ಅಶ್ವಿನ್ ರಾವ್ ವಿರುದ್ಧ ಐದು ಬೆದರಿಕೆ ಕರೆ ಕೇಸ್: ಭಾಸ್ಕರ್ ಹಾಗೂ ಅಶೋಕ್ ಅವರು ನೀರಾವರಿ ಇಲಾಖೆಯ ಅಧಿಕಾರಿ(ಬಿ ಚನ್ನಬಸಪ್ಪ)ಯನ್ನು ಅಶ್ವಿನ್ ರಾವ್ ಬಳಿ ಕರೆದೊಯ್ದು ಬಂದ ಮೇಲೆ ಆರೋಪಿಗಳು ಅಧಿಕಾರಿ ಮುಂದೆ 20 ಲಕ್ಷ ರು ಬೇಡಿಕೆ
ಇಟ್ಟಿದ್ದಾರೆ. ಅದರೆ, ಹೈದರಾಬಾದಿನಲ್ಲಿ ಇತ್ತೀಚೆಗೆ ಬಂಧಿತರಾದ ಅಶ್ವಿನ್ ರಾವ್ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿದೆ.[ಲೋಕಾಯುಕ್ತರನ್ನು ಬಂಧಿಸಲು ಸಕಾಲ: ನ್ಯಾ. ಸಂತೋಷ್ ಹೆಗ್ಡೆ]
ಲೋಕಾಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ಅವರು ಐಎಎಸ್ ಅಧಿಕಾರಿಯೊಬ್ಬರಿಗೆ ಬೆದರಿಕೆ ಒಡ್ಡಿ ಹಣ ಪಡೆಯಲು ಯತ್ನಿಸಿದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಅದರೆ, ಐಎಎಸ್ ಅಧಿಕಾರಿ ಯಾವುದೇ ಹಣವನ್ನು ರವಾನಿಸಿಲ್ಲ. ಅಶ್ವಿನ್ ವಿರುದ್ಧ ಒಟ್ಟು ಐದು ಬೆದರಿಕೆ ಕರೆ ಆರೋಪಗಳಿವೆ, ತನಿಖೆ ಮುಂದುವರೆದಂತೆ ಇನ್ನಷ್ಟು ಆರೋಪಗಳು ದಾಖಲಾಗುವ ಸಾಧ್ಯತೆಯಿದೆ.
ಭಾಸ್ಕರ್ ರಾವ್ ಅವರು ಎಲ್ಲಿ?: ಈ ನಡುವೆ ಎರಡು ತಿಂಗಳ ರಜೆ ಮೇಲೆ ತೆರಳಿರುವ ಲೋಕಾಯುಕ್ತ ಜಸ್ಟೀಸ್ ರಾವ್ ಅವರು ಬೆಂಗಳೂರಿಗೆ ಯಾವಾಗ ಹಿಂತಿರುಗುತ್ತಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಪ್ರಶ್ನೆಗಳ ಸರಣಿಯನ್ನು ಸಿದ್ಧಪಡಿಸಿ ಲೋಕಾಯುಕ್ತರಿಗೆ ಕಳಿಸಿದೆ. ಅದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಲೋಕಾಯುಕ್ತರ ಕಚೇರಿ, ಮನೆಯಿಂದಲೇ ಬೆದರಿಕೆ ಕರೆಗಳನ್ನು ಮಾಡಲಾಗಿರುವ ಬಗ್ಗೆ ಸಾಕಷ್ಟು ಪುರಾವೆಗಳಿರುವುದರಿಂದ ಭಾಸ್ಕರ್ ರಾವ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಇದು ಸಕಾಲ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications