ಬೆಂಗಳೂರಿಗೆ ರಕ್ಷಣಾ ಸಚಿವ ಪಾರಿಕ್ಕರ್, ಎಚ್ಎಎಲ್ಗೆ ಭೇಟಿ
ಬೆಂಗಳೂರು, ಜ. 17 : ದೇಶದ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ) ಮುಖ್ಯಸ್ಥ ಅವಿನಾಶ್ ಚಂದರ್ರನ್ನು ವಜಾ ಮಾಡಿದ ಎರಡು ದಿನಗಳ ನಂತರ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಒಂದು ದಿನದ ಭೇಟಿಯಾಗಿ ಅವರು ಶನಿವಾರ ನಗರಕ್ಕೆ ಆಗಮಿಸಿದ್ದಾರೆ.
ಒಂದು ದಿನದ ಭೇಟಿಯ ಸಂದರ್ಭದಲ್ಲಿ ಮನೋಹರ್ ಪಾರಿಕ್ಕರ್, ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್)ಗೆ ಭೇಟಿ ನೀಡಲಿದ್ದಾರೆ. ರಕ್ಷಣಾ ಸಚಿವರ ಭೇಟಿಯ ಬಗ್ಗೆ ಒನ್ ಇಂಡಿಯಾಕ್ಕೆ ಮಾಹಿತಿ ಲಭ್ಯವಾಗಿದೆ. ಯಾವುದೇ ಮಾಧ್ಯಮಗಳ ಜೊತೆ ಪಾರಿಕ್ಕರ್ ಭೇಟಿಯ ಸಂದರ್ಭದಲ್ಲಿ ಮಾತನಾಡುವುದಿಲ್ಲ. [ಎಚ್ ಎಎಲ್ ನಲ್ಲಿ ವಿಮಾನಯಾನಕ್ಕೆ ಸಚಿವರ ಒಲವು]

ಒನ್ ಇಂಡಿಯಾಕ್ಕೆ ದೊರಕಿದ ಮಾಹಿತಿಯಂತೆ ರಕ್ಷಣಾ ಸಚಿವರು ತಮ್ಮ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಗರಕ್ಕೆ ಆಗಮಿಸಿದ್ದಾರೆ. ಎಚ್ಎಎಲ್ಗೆ ಭೇಟಿ ನೀಡಲಿರುವ ಸಚಿವರು, ಎಚ್ಎಎಲ್ ಅಭಿವೃದ್ಧಿಪಡಿಸಿದ ತೇಜಸ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. [ಡಾ. ಅವಿನಾಶ್ ವಜಾ ಎಷ್ಟು ಸರಿ?]
ರಕ್ಷಣಾ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲಿರುವ ಸಚಿವರು, ಕೇಂದ್ರದಿಂದ ಯೋಜನೆಗಳಿಗೆ ಅಗತ್ಯವಿರುವ ಸಹಕಾರದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಯಾವ ಯೋಜನೆಗೆ ಕೇಂದ್ರದಿಂದ ಹೆಚ್ಚುವರಿ ಸಹಕಾರ ಬೇಕಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.
ತೇಜಸ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಬಗ್ಗೆ ಸಚಿವರಿಗೆ ಸಂಪೂರ್ಣ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ನೀಡಲು ಸಿದ್ಧತೆ ನಡೆಸಲಾಗಿದೆ. ಎಲ್ಸಿಎ ಸಾಧಾರಣವಾಗಿ ಏರ್ ಪೋರ್ಸ್ ಮುಖ್ಯಸ್ಥರಿಗೆ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿರುತ್ತದೆ. ಈ ಬಾರಿ ರಕ್ಷಣಾ ಸಚಿವರಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಬೇಕಿದೆ.
ರಕ್ಷಣಾ ಸಚಿವರೊಂದಿಗೆ ಏರ್ ಫೋರ್ಸ್ ಹಿರಿಯ ಅಧಿಕಾರಿ ಅರುಪ್ ರಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತೇಜಸ್ಗೆ 2015ರಲ್ಲಿ ಅಂತಿಮ ಒಪ್ಪಿಗೆ ನೀಡಲಾಗುತ್ತದೆ ಎಂದು ಮನೋಹರ್ ಪಾರಿಕ್ಕರ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದ್ದರಿಂದ ಇಂದಿನ ಭೇಟಿ ಬಹಳ ಮಹತ್ವ ಪಡೆದಿದೆ.












Click it and Unblock the Notifications