ಭ್ರಷ್ಟರ ಅಧಿಕಾರ ಬಿಡಿಸಲು 'ಕ್ವಿಟ್ ಪವರ್' ಚಳವಳಿ
ಬೆಂಗಳೂರು, ಸೆ. 6: 'ಭ್ರಷ್ಟರೇ, ಅಧಿಕಾರ ಬಿಟ್ಟು ತೊಲಗಿ' ಎಂಬ ಘೋಷವಾಕ್ಯದಡಿ ಪ್ರತಿಭಟನೆ ಆರಂಭಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶನಿವಾರ ಬಳ್ಳಾರಿ ರಸ್ತೆಯ ಬಿಡಿಎ ಮುಖ್ಯಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ಮಾತನಾಡಿ, ಕೈಗೆಟುಕುವ ದರದಲ್ಲಿ ನಗರದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಸೂರು ಕಲ್ಪಿಸಬೇಕಿದ್ದ ಬಿಡಿಎ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗಗಳಿಂದ ಇಡಿ ವ್ಯವಸ್ಥೆ ನರಳುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟ, ಕಳಂಕಿತ, ಬಿಡಿಎ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಅಧಿಕಾರದಿಂದ ವಜಾಗೂಳಿಸಿ ಅವರ ಸ್ಥಾನದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಒಂದುವೇಳೆ ಕಳಂಕಿತ ಅಧಿಕಾರಿಗಳು ತಾವಾಗಿಯೇ ರಾಜೀನಾಮೆ ಕೊಟ್ಟು ಹೋಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ಅಧಿಕಾರಿಗಳನ್ನು ಗುರುತಿಸಿ ಅವರ ಮನೆಯಮುಂದೆ ಹೋಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಸಿದ್ದಾರ್ಥ್ ಶರ್ಮಾ ಮಾತನಾಡಿ, ಆಮ್ ಆದ್ಮಿ ಪಕ್ಷವು ರಾಜ್ಯದ ಭ್ರಷ್ಟ, ಕಳಂಕಿತ ಸಚಿವರು ಮತ್ತು ಅಧಿಕಾರಿಗಳ ಪಟ್ಟಿ ತಯಾರಿಸಿದೆ. ಮುಂದಿನ ದಿನಗಳಲ್ಲಿ ಅವರ ಕಚೇರಿಗಳ ಎದುರು ಶಾಂತಿಯುತ ಹರತಾಳ ನಡೆಸಲಾಗುವುದು ಎಂದರು.
ಅರ್ಕಾವತಿ ಬಡಾವಣೆ ಹಗರಣದ ಸತ್ಯಾಸತ್ಯತೆ ಬಯಲಿಗೆ ಬರಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಸಮರ್ಥ ವಿರೋಧ ಪಕ್ಷಗಳಾಗಿಯೂ ಕಾರ್ಯನಿರ್ವಹಿಸದ ಬಿಜೆಪಿ ಮತ್ತು ಜೆಡಿಎಸ್ ಕ್ರಮಗಳನ್ನು ಖಂಡಿಸಲಾಗುವುದು. ರಾಜ್ಯದಲ್ಲಿ ಪ್ರತಿದಿನ ನಡೆಯುತ್ತಿರುವ ದುರಾಚಾರಗಳನ್ನು ಜನರ ಮುಂದೆ ಇಡಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಮ್ಮ ಹೋರಾಟಕ್ಕೆಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.