ತಂಬಾಕಿನಿಂದಾಗುವ ಹಾನಿಯ ಜಾಗೃತಿಗಾಗಿ ಕಿದ್ವಾಯಿಯಲ್ಲಿ ಜಾದೂ
ಬೆಂಗಳೂರು, ಮೇ 30 : ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಮೇ 31, ಮಂಗಳವಾರದಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಒಳರೋಗಿಗಳಿಗೆ ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಒಂದು ಉಚಿತ ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 4ರಿಂದ 6ರವರೆಗೆ ಆಸ್ಪತ್ರೆಯ ಧರ್ಮಶಾಲೆಯಲ್ಲಿ ಜಾದೂ ರಂಜಿಸಲಿದೆ.
ಅಂತಾರಾಷ್ಟ್ರೀಯ ತಂಬಾಕು ನಿಷೇಧದ ದಿನವಾದ ಮೇ 31ರಂದು ತಂಬಾಕಿನಿಂದಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಂಬಾಕಿನ ದುಷ್ಪರಿಣಾಮದ ಬಗ್ಗೆ ಜಾದೂ ಪ್ರದರ್ಶನದ ಮೂಲಕ ಸಂದೇಶವನ್ನು ಬೆಸೆಯಲಾಗುವುದು ಎಂದು ಜಾದೂಗಾರ ಎಸ್.ಪಿ. ನಾಗೇಂದ್ರ ಪ್ರಸಾದ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ವಿಶೇಷವೆಂದರೆ ಒಬ್ಬ ತರುಣಿಯನ್ನು ಡಬ್ಬದಲ್ಲಿ ಕೂಡಿಸಿ ಸಿಗರೇಟ್ ನಿಂದ ತಿವಿಯಲಾಗುವುದು, ಆಗ ಆ ತರುಣಿ ಕಣ್ಮರೆಯಾಗುವಳು. ಅಂದರೆ ನಮ್ಮ ಆರೋಗ್ಯವನ್ನು ಆ ತರುಣಿಗೆ ಹೋಲಿಸಿ, ಹೇಗೆ ನಮ್ಮ ಆರೋಗ್ಯದ ಮೇಲೆ ಸಿಗರೇಟ್ ದುಷ್ಪರಿಣಾಮ ಬೀರುವುದೆಂದು ತೋರಿಸಲಾಗುವುದು ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಖಾಯಿಲೆಯಿಂದ ನರಳುತ್ತಿರುವ ಮಕ್ಕಳ ಮನಸ್ಸಿಗೆ ಖುಷಿ ಕೊಡುವ ಹಾಗು ಪೋಷಕರಲ್ಲಿ ತಂಬಾಕಿನ ದುಷ್ಪರಿಣಾಮದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ನಾನು ಪ್ರತಿ ವರ್ಷದಂತೆ ಈ ಬಾರಿಯು ಉಚಿತ ಜಾದೂ ಪ್ರದರ್ಶನ ಕೊಡಲಿದ್ದೇನೆ ಎಂದು ಕರ್ನಾಟಕದ ಖ್ಯಾತ ಜಾದೂಗಾರ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. [ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]