ಕನ್ನಡ ಕಿರುತೆರೆ ನಟಿ ಶೃತಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ಬೆಂಗಳೂರು, ಮಾ. 01: ಕಿರುತೆರೆ ನಟಿ ಶೃತಿ (24) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸೋಮವಾರ ಸ್ನೇಹಿತಯೊಬ್ಬರ ಜೊತೆಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಕಾಚೋಹಳ್ಳಿ ಬಳಿ ಇರುವ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶೃತಿ ಅವರ ಶವ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶೃತಿ ಅವರ ಸ್ನೇಹಿತ ಶ್ರೀಕಾಂತ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಶೃತಿ ಅವರನ್ನು ಸೋಮವಾರ ಅವರ ಸ್ನೇಹಿತ ಶ್ರೀಕಾಂತ್ ಅವರ ಜೊತೆ ತೆರಳಿದ್ದರು. ಇಬ್ಬರು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀಕಾಂತ್ ಅವರ ಮನೆಗೆ ಹೋಗಿದ್ದ ಶೃತಿ ತನ್ನ ಮನೆಗೆ ಮರಳಿರಲಿಲ್ಲ. ಈ ಪಾರ್ಟಿಯಲ್ಲಿ ಶ್ರೀಕಾಂತ್ ಹಾಗು ಶೃತಿ ನಡುವೆ ಗಲಾಟೆಯಾಗಿತ್ತು ಎಂಬ ಮಾಹಿತಿ ಇದೆ. [ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!]
ಸ್ನೇಹಿತನ ಜತೆಗೆ ಹೋದ ಮಗಳು ಹಿಂತಿರುಗಿ ಬಾರದಿದ್ದಾಗ ಆತಂಕಗೊಂಡ ಶೃತಿ ಮನೆಯವರು ಕಾಚೋಹಳ್ಳಿಗೆ ಬಂದು ನೋಡಿದಾಗ ಶೃತಿ ಶವವಾಗಿ ಪತ್ತೆಯಾಗಿದ್ದಾರೆ.
ನೆಲಮಂಗಲದ ಕಾಚೋಹಳ್ಳಿಯಲ್ಲಿ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಯಾವಾಗ ಶೃತಿ ನಟಿಸಿದ್ದರು ಎಂಬುದರ ಬಗ್ಗೆ ಕೂಡಾ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶೃತಿ ಅವರಿಗೆ ಉಮೇಶ್ ಎಂಬುವವರ ಜೊತೆ ಮದುವೆಯಾಗಿದ್ದು, ಈ ದಂಪತಿಗೆ ಹೆಣ್ಣು ಮಗುವೂ ಕೂಡ ಇದೆ. ಸದ್ಯ ಶೃತಿ ಕುಟುಂಬಸ್ಥರು ಆಕೆಯ ಸಾವು ಆತ್ಮಹತ್ಯೆಯಲ್ಲಾ ಕೊಲೆ ಎಂದು ಆರೋಪ ಮಾಡಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಶೃತಿ ಅವರ ಶವವನ್ನು ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ಶೃತಿ ಕುಟುಂಬದವರು ನೀಡಿದ ದೂರಿನ ಅನ್ವಯ ಶ್ರೀಕಾಂತ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 306 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.