ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟಿ ಸೌಂದರ್ಯರನ್ನು ಜೀವಂತವಾಗಿಟ್ಟ ಅತ್ತಿಗೆ ನಿರ್ಮಲಾ

|
Google Oneindia Kannada News

ಇಂದು ನಟಿ ಸೌಂದರ್ಯ ಪುಣ್ಯತಿಥಿ. ತನ್ನಿಮಿತ್ತ ಅವರ ನೆನಪನ್ನು ಜೀವಂತವಾಗಿಡುವ ಪುಟ್ಟ ಪ್ರಯತ್ನವಾದ ಈ ಲೇಖನ ಮತ್ತೆ ನಿಮ್ಮ ಮುಂದೆ...
***

ತೊಟ್ಟಿಲು ತೂಗೋ ಕೈಗೆ ದೇಶದ ಚುಕ್ಕಾಣಿ ಹಿಡಿಯೋದೂ ಗೊತ್ತು. ಅಮ್ಮನಾಗಿ, ಅಕ್ಕನಾಗಿ, ಅಜ್ಜಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ತಂಗಿಯಾಗಿ, ಮಗಳಾಗಿ... ಹತ್ತು ಹಲವು ಪಾತ್ರಗಳನ್ನು ನಾಜೂಕಾಗಿ ನಿಭಾಯಿಸುವವಳು ಹೆಣ್ಣು. ಪ್ರಕೃತಿ ನೀಡಿದ ಕೆಲ ದೈಹಿಕ ದೌರ್ಬಲ್ಯದ ಹೊರತಾಗಿಯೂ ಅವನ್ನೆಲ್ಲ ಮೀರಿಯೂ ನಿಲ್ಲಬಲ್ಲವಳು.

ಕುಟುಂಬದ ಜವಾಬ್ದಾರಿಯನ್ನು ಹೆಗಲಮೇಲಿರಿಸಿಕೊಂಡೇ ಮಹತ್ತರವಾದುದನ್ನು ಸಾಧಿಸಿದವಳು. ಅಂಥ ಅಸಾಮಾನ್ಯ ಮಾನಿನಿಯರ ಸಾಹಸಗಾಥೆಯನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು 'ಒನ್ ಇಂಡಿಯಾ' ಆರಂಭಿಸಿದೆ. ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯವಾದುದನ್ನು ಸಾಧಿಸಿದ ಮಹಿಳಾ ಸಾಧಕರನ್ನು ಪ್ರತಿವಾರವೂ ಒನ್ ಇಂಡಿಯಾ ನಿಮ್ಮ ಮುಂದಿಡಲಿದೆ.

ಅದರ ಮೊದಲ ಹೆಜ್ಜೆಯಾಗಿ ನಟಿ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಅವರು, 'ಅಮರ ಸೌಂದರ್ಯ' ಎಂಬ ಶಾಲೆಯ ಮೂಲಕ ಅತ್ತಿಗೆ ಸೌಂದರ್ಯ ಮತ್ತು ಪತಿ ಅಮರನಾಥ್ ಅವರನ್ನು ಜೀವಂತವಾಗಿರಿಸಿದ ಕತೆ ಇಲ್ಲಿದೆ...

*****

ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!

ಏಪ್ರಿಲ್ 17, 2004 ಈ ದಿನ ಕರ್ನಾಟಕದ ಯಾರೊಬ್ಬರಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಕನ್ನಡಿಗರ ಮನೆ ಮಾತಾಗಿದ್ದ ಚಿತ್ರ ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಹೆಲಿಕಾಪ್ಟರ್ ನಲ್ಲಿ ದುರ್ಮರಣ ಕಂಡ ದಿನ ಇದು. ಆ ದುರಂತ ಸಂಭವಿಸಿ ಈಗ 13 ವರ್ಷಗಳೇ ಸಂದಿವೆ.

ಈ ದುರಂತ ನಡೆದ 6 ತಿಂಗಳಿನಲ್ಲಿ ಅಮರನಾಥ್ ಅವರ ಪತ್ನಿ ನಿರ್ಮಲಾ ಅಮರನಾಥ್ 'ಅಮರ ಸೌಂದರ್ಯ ಫೌಂಡೇಶನ್' ಎಂಬ ಹೆಸರಿನಲ್ಲಿ ಶಾಲೆಯೊಂದನ್ನು ತೆರೆದರು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ, ಕಲಿಕೆಯ ಸಾಮರ್ಥ್ಯವಿಲ್ಲದ ಮಕ್ಕಳನ್ನು ಎಲ್ಲರಂತೇ ಬದುಕಲು ಸಿದ್ಧಗೊಳಿಸುವ ಉದ್ದೇಶ ಈ ಶಾಲೆಯದ್ದು. ಈ ವಿಶೇಷ ಮಕ್ಕಳ ಸಾರ್ಥಕತೆಯ ನಗುವಿನಲ್ಲೇ ಪತಿ ಅಮರನಾಥ್ ಮತ್ತು ಅತ್ತಿಗೆ ಸೌಂದರ್ಯರನ್ನು ಬದುಕಿಸಿಕೊಂಡಿದ್ದಾರೆ ನಿರ್ಮಲಾ ಅಮರನಾಥ್!

ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ

ತಮ್ಮ ಶಾಲೆಯ ಆರಂಭ, ಅದರ ಕಾರ್ಯ ಚಟುವಟಿಗೆ, ಗುರಿಗಳನ್ನು ನಿರ್ಮಲಾ ಅಮರನಾಥ್ 'ಒನ್ ಇಂಡಿಯಾ' ಜೊತೆ ಹಂಚಿಕೊಂಡಿದ್ದಾರೆ. 'ಸೌಂದರ್ಯ' ನೆನಪನ್ನು 'ಅಮರ'ವಾಗಿಸಿರುವ ಬೆಂಗಳೂರಿನ ಆರ್ ಎಂವಿ ಎಕ್ಸ್ಟೆನ್ಶನ್ ನಲ್ಲಿರುವ 'ಅಮರ ಸೌಂದರ್ಯ' ಬಗ್ಗೆ ಈ ಫೌಂಡೇಶನ್ ನ ಚೇರ್ ಪರ್ಸನ್ ನಿರ್ಮಲಾ ಅಮರನಾಥ್ ಮಾತುಗಳು ಇಲ್ಲಿವೆ...

ಅವರ ನೆನಪನ್ನು ಜೀವಂತವಾಗಿರಿಸುವ ಪ್ರಯತ್ನ

ಅವರ ನೆನಪನ್ನು ಜೀವಂತವಾಗಿರಿಸುವ ಪ್ರಯತ್ನ

"ಒಂದು ಶಾಲೆ ಅಂದ್ರೆ ಹೇಗಿರ್ಬೇಕು? ಅಲ್ಲಿ ಭಯದ ಬದಲು ಆತ್ಮೀಯತೆ ಇರಬೇಕು. ಸ್ವತಂತ್ರ ವಾತಾವರಣ ಇರಬೇಕು, ಮಕ್ಕಳ ಕ್ರಿಯಾಶೀಲತೆ ಅರಳೋದಕ್ಕೆ ಶಾಲೆ ವೇದಿಕೆ ಆಗ್ಬೇಕು... ಅತ್ತಿಗೆ ನಟಿ ಸೌಂದರ್ಯ, ಪತಿ ಅಮರನಾಥ್ ಮತ್ತು ನಾನು (ನಿರ್ಮಲಾ ಅಮರನಾಥ್) ಯಾವಾಗಲೂ ಚರ್ಚೆ ಮಾಡ್ತಾ ಇದ್ದ ವಿಷಯ ಇದು. ಅಂಥದೊಂದು ಶಾಲೆ ನಮ್ಮ ಮೂವರ ಕನಸಾಗಿತ್ತು. ಒಂದು ಅತ್ಯಂತ ಕೆಟ್ಟ ಘಳಿಗೆಯಲ್ಲಿ ನಡೆಯಬಾರದ ಘಟನೆ ನಡೆದು ಅವರಿಬ್ಬರೂ ಬಾರದ ಲೋಕಕ್ಕೆ ಹೊರಟುಹೋದರು. ಆದರೆ ಅವರನ್ನು ಮತ್ತೆ ಬದುಕಿಸಿಕೊಳ್ಳೋದಕ್ಕೆ ನನ್ನ ಬಳಿ ಇದ್ದ ದಾರಿ ಈ ಶಾಲೆಯೊಂದೇ! ಅವರ ನೆನಪನ್ನು ಸದಾ ಜೀವಂತವಾಗಿ ಇರಿಸೋ ಪ್ರಯತ್ನವಾಗಿ ಈ ಶಾಲೆ 2004 ಅಕ್ಟೋಬರ್ ನಲ್ಲಿ ಶುರುವಾಯ್ತು"

ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ

ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ

"ಆಟಿಸಂ, ಕಲಿಕೆಯ ಸಾಮರ್ಥ್ಯವಿಲ್ಲದ ಮಕ್ಕಳು, ನಿಧಾನವಾಗಿ ಕಲಿಯುವ ಮಕ್ಕಳು ಇತ್ಯಾದಿ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಜೀವನಕ್ಕೆ ಅತ್ಯಗತ್ಯ ಪಾಠಗಳನ್ನು ಕಲಿಸುವ ಕೆಲಸವನ್ನು ಅಮರ ಸೌಂದರ್ಯ ಮಾಡುತ್ತಿದೆ. ಇದೊಂದು ಎನ್ ಜಿಒ. ಸರ್ಕಾರದಿಂದಾಗಲೀ, ಯಾವುದೇ ಸಂಘ-ಸಂಸ್ಥೆಗಳಿಂದಾಗಲಿ ದೇಣಿಗೆ ಪಡೆಯದೇ ಸ್ವತಂತ್ರವಾಗಿ ಗುಣಮಟ್ಟದ ಸೇವೆ ನೀಡುವುದು ನಮ್ಮ ಉದ್ದೇಶ. ಮಕ್ಕಳಿಂದ ಕನಿಷ್ಠ ಶುಲ್ಕವನ್ನಷ್ಟೇ ತೆಗೆದುಕೊಂಡು ಅವರಿಗೆ ಅಗತ್ಯ ತರಬೇತಿ ನೀಡುತ್ತೇವೆ. ಓದಿನ ನಂತರ ಉದ್ಯೋಗ ತರಬೇತಿ ನೀಡಿ ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವ ಗುರಿ ನಮ್ಮದು"

ಎನ್ ಐಒಎಸ್ ಮಾನ್ಯತೆ

ಎನ್ ಐಒಎಸ್ ಮಾನ್ಯತೆ

"ಅಮರ ಸೌಂದರ್ಯ ಫೌಂಡೇಶನ್ ಎನ್ ಐ ಒಎಸ್(National Institute of Open Schooling) ನಿಂದ ಮಾನ್ಯತೆ ಪಡೆದಿದೆ. ಎರಡೂವರೆ ವರ್ಷದಿಂದ ಮಕ್ಕಳಿಗೆ ತರಬೇತಿ ಆರಂಭವಾಗುತ್ತದೆ. ಶಾಲೆಗೆ ಸೇರಿಕೊಳ್ಳುವ ಮೊದಲೇ ಅವರಿಗೆ ಪೂರ್ವತಯಾರಿ ಮಾಡಿಸಲಾಗುತ್ತದೆ. 5 ವರ್ಷದ ನಂತರ ಶಾಲೆಗೆ ಅಧಿಕೃತವಾಗಿ ಸೇರುವ ಮಕ್ಕಳು ಎನ್ ಐ ಒಎಸ್ ನ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಈ ಮಕ್ಕಳು ಎಸ್ಸೆಸ್ಸೆಲ್ಸಿ ಮುಗಿಸುವವರೆಗೂ ಅವರಿಗೆ ತರಬೇತಿ ನೀಡುವ ಹೊಣೆ ನಮ್ಮದು. ಇದು ಸೆಮಿ ರೆಸಿಡೆನ್ಷಿಯಲ್ ಶಾಲೆ. ಮಕ್ಕಳು ಬೆಳಿಗ್ಗೆ 9 ಕ್ಕೆ ಬಂದರೆ 4 ಗಂಟೆಯವರೆಗೂ ಶಾಲೆಯಲ್ಲಿರುತ್ತಾರೆ. ಅವರಿಗೂ ಮಧ್ಯಾಹ್ನದ ಊಟವನ್ನೂ ನಾವೇ ಪೂರೈಸುತ್ತೇವೆ."

ಉದ್ಯೋಗ ತರಬೇತಿ

ಉದ್ಯೋಗ ತರಬೇತಿ

"16 ವರ್ಷದ ನಂತರ ಈ ಮಕ್ಕಳಿಗೆ ಉದ್ಯೋಗ ತರಬೇತಿ ನೀಡುತ್ತೇವೆ. ಜೆರಾಕ್ಸ್ ಮೆಶಿನ್ ಆಪರೇಟ್ ಮಾಡೋದು ಹೇಗೆ, ಸ್ಪೈರಲ್ ಬೈಂಡಿಂಗ್, ಲ್ಯಾಮಿನೇಶನ್, ಬೇಕರಿ ಐಟೆಂ, ಬ್ಯೂಟಿಶಿಯನ್, ಡೇಟಾ ಎಂಟ್ರಿ ಕೋರ್ಸ್ ಗಳ ತರಬೇತಿ ನೀಡ್ತೀವಿ. ಕೇವಲ ಮಕ್ಕಳಷ್ಟೇ ಅಲ್ಲ, ಬೇರೆ ಯಾವುದೇ ರೀತಿಯ ದೈಹಿಕ ನ್ಯೂನತೆ ಇರುವ, ಯಾವುದೇ ವಯಸ್ಸಿನವರು ಬಂದರೂ ಅವರಿಗೆ ಈ ತರಬೇತಿ ಕೊಡುತ್ತೇವೆ. "

ಪಾಲಕರಲ್ಲಿ ಅರಿವು ಮೂಡಿಸುವ ಯತ್ನ

ಪಾಲಕರಲ್ಲಿ ಅರಿವು ಮೂಡಿಸುವ ಯತ್ನ

"ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಪಾಲಕರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಅಮರ ಸೌಂದರ್ಯ ವತಿಯಿಂದ ಮಾಡುತ್ತಿದ್ದೇವೆ. ಬೇರೆ ಬೇರೆ ಶಾಲೆ, ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡು, ಪಾಲಕರು ತಮ್ಮ ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಮೂಡಿಸುವುದು ಹೇಗೆ ಎಂಬ ಕುರಿತು ತರಬೇತಿ ನೀಡುತ್ತೇವೆ"

ನಮ್ಮ ಮುಂದಿರುವ ಕನಸು

ನಮ್ಮ ಮುಂದಿರುವ ಕನಸು

"ಶಾಲೆ ನಾವಂದುಕೊಂಡ ಹಾಗೇ ನಡೆಯುತ್ತಿದೆ. ಆದರೆ ಇದರಾಚೆಯೂ ನಮ್ಮ ಕನಸಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂಥ ಮಕ್ಕಳಿಗಾಗಿ ವೃತ್ತಿ ತರಬೇತಿ ಕೇಂದ್ರಗಳನ್ನು ಆರಂಭಿಸುವ ಕನಸಿದೆ. ಆದರೆ ಅವೆಲ್ಲಕ್ಕೂ ನಾವು ಬಂಡವಾಳ ಹಾಕುವುವದು ಕಷ್ಣ. ಮಾನವೀಯ ಅಂತಃಕರಣವಿರುವ ಯಾರೇ ಆದರೂ ಬಂಡವಾಳ ಹೂಡಲು ಸಿದ್ಧರಾಗಿ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಅಲ್ಲಿ ವೃತ್ತಿ ತರಬೇತಿ ಕೇಂದ್ರ ಆರಂಭಿಸುವುದಾರೆ ಬೇರೆಲ್ಲ ರೀತಿಯ ಸಹಕಾರವನ್ನೂ ನಾವು ನೀಡುತ್ತೇವೆ. ಈಗಾಗಲೇ ನಮ್ಮಲ್ಲಿ ವಿಶೇಷ ಮಕ್ಕಳಿಗೆ ಅಗತ್ಯವಿರುವ ಥೆರಪಿ, ಆಪ್ತಸಮಾಲೋಚನೆ ಮುಂತಾದವುಗಳ ಜವಾಬ್ದಾರಿ ಹೊರುವುದಕ್ಕೆ ಎಷ್ಟೋ ವೈದ್ಯರುಗಳು, ಶಿಕ್ಷಕರು ಸ್ವ ಇಚ್ಛೆಯಿಂದ ಮುಂದೆ ಬಂದು, ನಮ್ಮಿಂದ ಯಾವುದೇ ರೀತಿಯ ಪ್ರತಿಫಲ ನಿರೀಕ್ಷಿಸದೆ ಕೆಲಸ ಮಾಡುತ್ತಿದ್ದಾರೆ. ಅಂಥವರೆಲ್ಲರಿಂದಾಗಿ ಈ ಶಾಲೆ ಇಷ್ಟು ಚೆನ್ನಾಗಿ ನಡೆಯುತ್ತಿದೆ."

ಅವರಿನ್ನೂ ಬದುಕಿದ್ದಾರೆ!

ಅವರಿನ್ನೂ ಬದುಕಿದ್ದಾರೆ!

ಸೌಂದರ್ಯ ಮತ್ತು ಅಮರನಾಥ್ ಇದ್ದಿದ್ದರೆ ಶಾಲೆಯ ಬೆಳವಣಿಗೆ ಕಂಡು ಎಷ್ಟು ಖುಷಿಪಡುತ್ತಿದ್ದರೋ ಎಂದು ನಾನು ಎಂದಿಗೂ ಯೋಚಿಸೋಲ್ಲ. ಯಾಕಂದ್ರೆ ಅವರು ಇಂದಿಗೂ ನಮ್ಮೊಂದಿಗೇ ಇದ್ದಾರೆ. ಈ ಶಾಲೆಯ ಮಕ್ಕಳ ನಗುವಿನಲ್ಲಿ ಅವರ ಜೀವವಿದೆ. ಅವರ ಆಶೀರ್ವಾದ, ಹಾರೈಕೆಯಿಲ್ಲದಿದ್ದರೆ ನಾವೆಲ್ಲ ಏನೂ ಅಲ್ಲ. ಇದ್ಯಾವುದನ್ನೂ ನಾವು ನಡೆಸುತ್ತಿಲ್ಲ, ಅವರ ಆಶೀರ್ವಾದ ನಡೆಸಿಕೊಂಡು ಹೋಗುತ್ತಿದೆ"

ಕಣ್ಣಾಲಿಗಳನ್ನು ಒದ್ದೆಯಾಗಿಸಿಕೊಂಡು ನಿರ್ಮಲಾ ಅವರು ಹೇಳಿದ ಆ ಮಾತು ಈ ಶಾಲೆಯ ಮಕ್ಕಳ ನಗುಮುಖ ಕಂಡಾಗ ಉತ್ಪ್ರೇಕ್ಷೆಯಲ್ಲ ಅನ್ನಿಸುತ್ತೆ.

*****

ನಿಮಗೂ ಇಂಥ ಸಾಧಕರ ಪರಿಚಯವಿದ್ದರೆ ಸಾಧಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಸಾಧನೆಯ ಸಂಕ್ಷಿಪ್ತ ವಿವರಗಳನ್ನು ನಮಗೆ ತಿಳಿಸಿ. ಅಂಥ ಸಾಧಕಿಯರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ನಾವು ಮಾಡುತ್ತೇವೆ.

English summary
Oneindia is bringing you Many Indian women who have changed our lives by inspiring us to be passionate, consistent and hardworking. Here is Nirmala Amaranath's story who is sister in law of Kannada actress Soundarya and wife of Soundarya's brother. She started a school in the memory of her husband and sister in law, named Amara Soundarya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X