ದರೋಡೆ ಮಾಡಿ ಮತ್ತೆ ಪಂಜರ ಸೇರಿದ ಪಾರಿವಾಳ ಮಂಜ
ಬೆಂಗಳೂರು, ಜೂ. 17 : ಆರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ ಪಾರಿವಾಳ ಮಂಜ ಮತ್ತೆ ಜೈಲು ಸೇರಿದ್ದಾನೆ. ಪಾರಿವಾಳ ಹಿಡಿಯಲು ಹೋಗುತ್ತಿದ್ದೇನೆ ಎಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಂಜನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಅಲಿಯಾಸ್ ಪಾರಿವಾಳ ಮಂಜನ (32) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ 4, ಕಬ್ಬನ್ಪಾರ್ಕ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿತ್ತು. ಬಂಧತ ಮಂಜನಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. [ಬೈಕ್ ಕದ್ದು, ಪೊಲೀಸರಿಗೆ ಪತ್ರ ಬರೆದ]

ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಮಂಜ ಜೈಲು ಸೇರಿದ್ದ. ಆರು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಗೆ ಬಂದಿದ್ದ. ಪುನಃ ಮನೆಗಳಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ.
ಹೇಗೆ ಕದಿಯುತ್ತಿದ್ದ ಪಾರಿವಾಳ ಮಂಜ? : 4-5 ಮಹಡಿಗಳ ಮನೆಗಳೇ ಪಾರಿವಾಳ ಮಂಜನ ಟಾರ್ಗೆಟ್. ಮಹಡಿ ಹತ್ತುವ ಮಂಜ ಬೀಗ ಹಾಕಿದ ಮನೆಗಳನ್ನು ನೋಡಿಕೊಂಡು ಕಳ್ಳತನ ಮಾಡುತ್ತಿದ್ದ. ಮಹಡಿ ಹತ್ತುವಾಗ ಯಾರಾದರೂ ಕೇಳಿದರೆ ಪಾರಿವಾಳ ಹಾರಿ ಹೋಗಿದೆ ಅದನ್ನು ತರಲು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದ.
ಒಂದು ವೇಳೆ ಯಾರು ತನ್ನನ್ನು ಗುರುತಿಸದೇ ಇದ್ದರೆ ಬೀಗ ಹಾಕಿರುವ ಮನೆಯನ್ನು ಪತ್ತೆ ಹಚ್ಚಿ ಕಳ್ಳತನ ಮಾಡುತ್ತಿದ್ದ. ಹಲವು ಬಾರಿ ಇದೇ ತಂತ್ರ ಉಪಯೋಗಿಸಿ ಕಳ್ಳತನ ಮಾಡಿರುವ ಮಂಜುನಾಥ ಪಾರಿವಾಳ ಮಂಜನೆಂದೇ ಕುಖ್ಯಾತಿಗಳಿಸಿದ್ದಾನೆ.












Click it and Unblock the Notifications