ನಾಲ್ಕು ಕ್ಷೇತ್ರದಲ್ಲಿ ಗೆಲುವು, ಶಿವಮೊಗ್ಗದಲ್ಲಿ ನೈತಿಕ ಗೆಲುವು: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 06: ಉಪಚುನಾವಣೆ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ನಾಲ್ಕು ಕ್ಷೇತ್ರದಲ್ಲಿ ನಮಗೆ ಭರ್ಜರಿ ಗೆಲುವಾಗಿದ್ದರೆ ಶಿವಮೊಗ್ಗ ಕ್ಷೇತ್ರದಲ್ಲಿ ನೈತಿಕ ಗೆಲುವಾಗಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸೂಚನೆಯಂತೆ ಕೊನೆಯ ಕ್ಷಣದಲ್ಲಿ ಮಧು ಬಂಗಾರಪ್ಪ ಅವರನ್ನು ಅಭ್ಯರ್ಥಿ ಮಾಡಲಾಯಿತು. ತಯಾರಿಗೆ ಹೆಚ್ಚು ಅವಕಾಶ ಸಹ ಇರಲಿಲ್ಲ, ಕಾಲಾವಕಾಶ ಇದ್ದಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಅವರು ಹೇಳಿದರು.
ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳು
ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಎಂದು ಕರೆಯುತ್ತಿದ್ದ ಬಿಜೆಪಿಯವರಿಗೆ ಈ ಫಲಿತಾಂಶವು ತಕ್ಕ ಉತ್ತರ ಎಂದು ಕುಮಾರಸ್ವಾಮಿ ಹೇಳಿದರು. ಈ ಫಲಿತಾಂಶವು ರಾಜ್ಯದ ಜನ ಮೈತ್ರಿ ಸರ್ಕಾರದ ಪರವಾಗಿದ್ದರೆ ಎನ್ನುವುದಕ್ಕೆ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.
ಮೈತ್ರಿಯ ಶಕ್ತಿಯನ್ನು ತೋರಿಸಿದೆ
ಚುನಾವಣೆ ಗೆಲುವು ಮೈತ್ರಿಯ ಶಕ್ತಿಯನ್ನು ಸಾರಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಹ ಇದೇ ರೀತಿ ಒಕ್ಕೂರಲಿನಿಂದ ಒಮ್ಮತದ ಅಭ್ಯರ್ಥಿಗಳನ್ನು ಆರಿಸಿ ಚುನಾವಣೆ ಎದುರಿಸುವುದು ಮಿತ್ರ ಪಕ್ಷಗಳ ಗುರಿ ಆಗಲಿದೆ. ಈ ಚುನಾವಣಾ ವಿಜಯದಿಂದ ಮೈತ್ರಿಗೆ ಬಲ ಬಂದಿದೆ ಎಂದು ಅವರು ಹೇಳಿದರು.
ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಮತ್ತೆ ಸಾಬೀತಾಗಿದೆ: ಪುಟ್ಟರಾಜು
ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕಾಗೋಡು ತಿಮ್ಮಪ್ಪ, ಡಿ.ಕೆ.ಶಿವಕುಮಾರ್ ಸೇರಿ ಇನ್ನೂ ಹಲವು ಕಾಂಗ್ರೆಸ್ ನಾಯಕರು ಉಪಚುನಾವಣೆಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಚಿರರುಣಿ ಎಂದು ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದರು.
ಉಪ ಚುನಾವಣೆ ಫಲಿತಾಂಶ : ಸತ್ಯವಾಯಿತು ಗುಪ್ತಚರ ಇಲಾಖೆ ವರದಿ!
ಮೈಮರೆತು ಕೂರುವಂತೆ ಇಲ್ಲ
ಉಪಚುನಾವಣೆ ಫಲಿತಾಂಶ ನಮ್ಮ ಪರವಾಗಿ ಬಂದಿದೆ ಎಂದು ಮೈಮರೆತು ಕೂರುವಂತೆ ಇಲ್ಲ ಎಂದ ಅವರು, ಕೆಲವು ತಿಂಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವ ಸಾಧಿಸುವ ಗುರಿಯನ್ನು ನಾವು ಹಾಕಿಕೊಳ್ಳಬೇಕಿದೆ. ಜನ ನಮ್ಮನ್ನು ಗೆಲ್ಲಿಸಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಎಂದು ಅವರು ಹೇಳಿದರು.
ಉಪಚುನಾವಣೆ ಫಲಿತಾಂಶ
ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳು ಹಾಗೂ ರಾಮನಗರ, ಜಮಖಂಡಿ ಕ್ಷೇತ್ರದ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಜೆಡಿಎಸ್ನಿಂದ ಜಮಖಂಡಿ, ರಾಮನಗರ ಮತ್ತು ಶಿವಮೊಗ್ಗದಲ್ಲಿ ಚುನಾವಣೆಗೆ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ ರಾಮನಗರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸೋಲನ್ನು ಅನುಭವಿಸಿದ್ದಾರೆ. ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಜಯಗಳಿಸಿದೆ.