ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತ ಗಳಿಸಿದ್ದೇವೆ:ಪ್ರಹ್ಲಾದ್ ಜೋಷಿ
ಬೆಂಗಳೂರು, ಡಿಸೆಂಬರ್ 18: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ರಾಜ್ಯದ ಬಿಜೆಪಿ ನಾಯಕರು ಗರಿಗೆದರಿಕೊಂಡಿದ್ದಾರೆ.
ಯಡಿಯೂರಪ್ಪ, ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಷಿ, ರಾಮದಾಸ್ ಮತ್ತಿತರೆ ನಾಯಕರು ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆಗೆ ಸಂತೋಷ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲೂ ಇದೇ ಫಲಿತಾಂಶ ಪ್ರತಿಫಲನವಾಗಲಿದೆ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಗುಜರಾತ್ನಲ್ಲಿ ಬಿಜೆಪಿ ವಿರುದ್ಧ ಜಾತಿಗಳನ್ನು ಎತ್ತಿ ಕಟ್ಟಿದ್ದರೂ ಕೂಡ ಜನ ಅಭಿವೃದ್ಧಿಗೇ ಮತ ಹಾಕಿದ್ದಾರೆ ಎಂದಿದ್ದಾರೆ.
ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಬಿಜೆಪಿ ಕಡಿಮೆ ಸ್ಥಾನ ಪಡೆದಿರುವ ಬಗ್ಗೆ ಮಾತನಾಡಿದ ಅವರು ಸಂಪೂರ್ಣ ಫಲಿತಾಂಶ ಬರುವ ಬಗ್ಗೆ ಈ ಬಗ್ಗೆ ಹೇಳಲು ಸಾಧ್ಯವಿಲ್ಲ ಆದರೆ ಈಗ ಬಂದಿರುವ ವರದಿಗಳ ಪ್ರಕಾರ ಬಿಜೆಪಿ ಗಳಿಸಿರುವ ಒಟ್ಟಾರೆ ಮತಗಳ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಿದೆ ಹಾಗಾಗಿ ಬಿಜೆಪಿ ಜನಪ್ರಿಯತೆ ಕುಂದಿದೆ ಎಂದು ವಾದ ಮಾಡುವಂತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸಾಧಿಸಿರುವ ಮುನ್ನಡೆಯೇ ಸಾಕ್ಷಿ. ಕರ್ನಾಟಕದಲ್ಲಿಯೂ ಬಿಜೆಪಿ 150 ಸ್ಥಾನಗಳಲ್ಲಿ ಜಯಗಳಿಸಲಿದೆ. ನಾಳೆಯಿಂದ ಕಾಂಗ್ರೆಸ್, ಜೆಡಿಎಸ್ನ ರಾಜ್ಯ, ತಾಲೂಕು, ಜಿಲ್ಲಾ ಮಟ್ಟದ ನಾಯಕರು ಬಿಜೆಪಿ ಕಡೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications