ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಣಿ, ದಕ್ಷಿಣ ಭಾರತದತ್ತ ಗಮನ
ಬೆಂಗಳೂರು, ಮಾ. 30 : ಉದ್ಯಾನ ನಗರಿ ಬೆಂಗಳೂರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಸಜ್ಜಾಗುತ್ತಿದೆ. ಮೂರು ದಿನಗಳ ಕಾಲ ಕಾರ್ಯಕಾರಣಿ ಸಭೆ ನಡೆಯಲಿದ್ದು, ದಕ್ಷಿಣ ಭಾರತದಲ್ಲಿ ಪಕ್ಷವನ್ನು ಕಟ್ಟುವ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ. ಲಲಿತ್ ಅಶೋಕ್ ಹೋಟೆಲ್ನಲ್ಲಿ ಏ.2ರಿಂದ ಈ ಸಭೆ ನಡೆಯಲಿದ್ದು, ಬಿಜೆಪಿಯ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಭಾರತದ ಮೇಲೆ ಕಣ್ಣು : ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಮೂರು ದಿನಗಳ ಕಾರ್ಯಕಾರಣಿ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಲಿದೆ. ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ. [ಬಿಜೆಪಿ ಕಾರ್ಯಕಾರಿ ಸಮಿತಿಯಿಂದ ಯಡಿಯೂರಪ್ಪ ಔಟ್]
ಈ ಬಾರಿ ಬಿಹಾರದಲ್ಲಿ ಬಹುಮತ ಪಡೆದು ಅಧಿಕಾರ ಪಡೆಯಬೇಕು ಎಂದು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ಕಾರ್ಯಕಾರಣಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆಯೂ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ. [ಏ.4ರಂದು ಬೆಂಗಳೂರಲ್ಲಿ ಮೋದಿ ಸಮಾವೇಶ]
ಕರ್ನಾಟಕದ ನಾಯಕರಿಗೆ ಜವಾಬ್ದಾರಿ : ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಚ್ಚು ಬಲ ಹೊಂದಿರುವುದು ಕರ್ನಾಟಕದಲ್ಲಿ. ಈಗಾಗಲೇ ಒಂದು ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಆಡಳಿತ ನಡೆಸಿದೆ. ಆದ್ದರಿಂದ ಕರ್ನಾಟಕದ ಪ್ರಮುಖ ಬಿಜೆಪಿ ನಾಯಕರಿಗೆ ದಕ್ಷಿಣ ಭಾರದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.
ದೇಶಾದ್ಯಂತ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ನಡೆಸುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಅಭಿಯಾನದ ಸ್ಥಿತಿ-ಗತಿಗಳು ಏನು? ಎಂಬ ಬಗ್ಗೆ ಚರ್ಚೆಗಳು ಕಾರ್ಯಕಾರಣಿ ಸಭೆಯಲ್ಲಿ ನಡೆಯಲಿದೆ. ಕರ್ನಾಟಕದಲ್ಲಿಯೂ 1 ಕೋಟಿ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಗುರಿ ಇದೆ.












Click it and Unblock the Notifications