ಅತ್ಯಂತ ಪ್ರಾಮಾಣಿಕ ವಕೀಲನನ್ನು ಕಳೆದುಕೊಂಡ ಬೆಂಗಳೂರು
ಬೆಂಗಳೂರು, ಜೂನ್ 18 : ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಎಸ್ಐಟಿಯ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ವಕೀಲ ಕೆ.ಜನಾರ್ದನ್ ಅವರು ವಿಧಿವಶರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ 2.30ಕ್ಕೆ ಅವರು ಕೆ.ಜನಾರ್ದನ್ (66) ಅವರು ಮೃತಪಟ್ಟಿದ್ದಾರೆ. ಜ್ವರ ಮತ್ತು ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಿಡ್ನಿ ವೈಫಲ್ಯದಿಂದಾಗಿ ಜನಾರ್ದನ್ ಅವರ ಪತ್ನಿ ವರಲಕ್ಷ್ಮೀ ಅವರು ಜನವರಿಯಲ್ಲಿ ಸಾವನ್ನಪ್ಪಿದ್ದರು. [SPP ಜನಾರ್ದನ್ ರಾಜೀನಾಮೆ]
ಹಲವಾರು ಹೈ ಪ್ರೊಫೈಲ್ ಕೇಸುಗಳಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಜನಾರ್ದನ್ ವಾದ ಮಂಡನೆ ಮಾಡಿದ್ದರು. ಸದಾ ನಗುಮೊಗದಿಂದ ಇರುತ್ತಿದ್ದ ಅವರು ದೊಡ್ಡ ಕೇಸುಗಳ ಪರವಾಗಿ ವಾದ ಮಾಡುತ್ತಿದ್ದೇನೆ ಎಂಬ ಒತ್ತಡವಿಲ್ಲದೆ ಕೆಲಸ ಮಾಡುತ್ತಿದ್ದರು.
ಬಿಡದಿಯ ವಿವಾದಿತ ನಿತ್ಯಾನಂದ ಸ್ವಾಮಿ ಪ್ರಕರಣ, ಬೆಂಗಳೂರು ಸರಣಿ ಸ್ಫೋಟ ಪ್ರಕರಣ, ಲೋಕಾಯುಕ್ತ ಕಚೇರಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಜನಾರ್ದನ ಅವರು ವಾದ ಮಂಡನೆ ಮಾಡಿದ್ದರು. [ಬೆಂಗಳೂರು ಸ್ಫೋಟ : ಮದನಿ ವಿರುದ್ಧ ಉಲ್ಟಾ ಹೊಡೆದ ಸಾಕ್ಷಿಗಳು]
ಲೋಕಾಯುಕ್ತ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ಅವರು, ಮೂರು ತಿಂಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಾಮಾಣಿಕತೆ ಪಾಠ ಹೇಳಿಕೊಟ್ಟವರು : ಕೆ.ಜನಾರ್ದನ್ ಅವರ ಪುತ್ರಿಯರಾದ ಅಕ್ಷತಾ ಮತ್ತು ಅಮಿತಾ ಅವರು ಆರು ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ವಕೀಲರಾಗಿರುವ ಅಕ್ಷತಾ ಅವರು 'ತಂದೆ ನಮಗೆ ಪ್ರಾಮಾಣಿಕತೆ ಪಾಠ ಹೇಳಿಕೊಟ್ಟರು' ಎಂದು ನೆನಪು ಮಾಡಿಕೊಂಡಿದ್ದಾರೆ.
ಜನಾರ್ದನ್ ಅವರು 'Karnataka State Prosecuting Officers' Association' ಸ್ಥಾಪಿಸಿದ್ದರು. ಅಸೋಸಿಯೇಷನ್ ಸದಸ್ಯರು ಜನಾರ್ದನ್ ಅವರ ಸಾವಿನಿಂದಾಗಿ ಅಘಾತಕ್ಕೆ ಒಳಗಾಗಿದ್ದಾರೆ.