ಕಲಾಂ ಭೇಟಿಯಾಗುವ ಸೇನಾ ಸಿಪಾಯಿ ಕನಸು ನನಸು
ಬೆಂಗಳೂರು, ಜೂ. 11 : ಮೂವತ್ತು ವರ್ಷದ ಸಿಪಾಯಿ ರೆಂಜಿತ್ ಸಿ ಅಭಿಜಾತ ಕಲಾವಿದ. ಭಾರತೀಯ ಸೇನೆಯಲ್ಲಿ ಹನ್ನೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರೆಂಜಿತ್ ಅವರಿಗೆ ಕ್ಯಾನ್ವಾಸಿನ ಮೇಲೆ ಚಿತ್ರಕಲೆಯನ್ನು ಅರಳಿಸುವುದು ಕರತಲಾಮಲಕ. ಪ್ರಾಣಿಯನ್ನು ಅಪಾರವಾಗಿ ಪ್ರೀತಿಸುವ ರೆಂಜಿತ್ ಕನಸೊಂದನ್ನು ಕಂಡಿದ್ದರು.
ಬೆಂಗಳೂರಿನ ಕೇರಳ ಮತ್ತು ಕರ್ನಾಟಕ ಸಬ್-ಏರಿಯಾ ಕಮಾಂಡ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಕೇರಳ ಮೂಲದ ಸಿಪಾಯಿಯ ಕನಸು ನನಸಾಗುವ ವೇಳೆ ಹತ್ತಿರ ಬಂದಿದೆ. ಶುಕ್ರವಾರ, ಜೂನ್ 12ರಂದು ತಮ್ಮ ಆರಾಧ್ಯದೈವ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಜಭವನದಲ್ಲಿ ಭೇಟಿಯಾಗುತ್ತಿದ್ದಾರೆ.
ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ರೆಂಜಿತ್ ಅವರ, ಐದು ದಿನಗಳ ಏಕವ್ಯಕ್ತಿ ಕಲಾ ಪ್ರದರ್ಶನ 'ಅವೇಕನಿಂಗ್' ಜೂನ್ 10ರಿಂದ ಆರಂಭವಾಗಿದೆ. ಈ ಕಲಾ ಪ್ರದರ್ಶನದ ಥೀಮ್ ಏನೆಂದರೆ, 'ಪ್ರಾಣಿಗಳ, ಅದರಲ್ಲೂ ಹಸುಗಳ ಹತ್ಯೆ ಮಾಡಬೇಡಿ'. [ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]
ಈ ಥೀಮ್ ಇಟ್ಟುಕೊಂಡು ರೆಂಜಿತ್ ಅವರು ರಚಿಸಿರುವ ಹಲವಾರು ಅದ್ಭುತ ವರ್ಣಚಿತ್ರಗಳು ಆರ್ಟ್ ಗ್ಯಾಲರಿಯಲ್ಲಿ ನೋಡುಗರ ಮನಸೂರೆಗೊಳ್ಳುತ್ತಿವೆ. ಈ ಥೀಮ್ ಹೊರತಾದ ಚಿತ್ರಗಳು ಕೂಡ ಪ್ರದರ್ಶನಕ್ಕಿವೆ. ಅವುಗಳಲ್ಲೊಂದು ಡಾ. ಅಬ್ದುಲ್ ಕಲಾಂ ಅವರು ವೀಣೆ ನುಡಿಸುತ್ತಿರುವುದು. ಇದು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಹಸು ಕೊಂಡು ಬಡ ರೈತನಿಗೆ ದಾನ
ಈ ಪ್ರದರ್ಶನದಲ್ಲಿ ಇಟ್ಟಿರುವ ಚಿತ್ರಗಳ ಮಾರಾಟದಿಂದ ಸಿಗುವ ಹಣದಿಂದ ಹಸುವನ್ನು ಕೊಂಡು ಬಡ ರೈತನಿಗೆ ದಾನವಾಗಿ ನೀಡುವುದು ರೆಂಜಿತ್ ಅವರ ಆಸೆಗಳಲ್ಲೊಂದು. "ಪೇಟಿಂಗ್ ನಿಂದ ಬಂದ ಆದಾಯದಲ್ಲಿ ಒಂದು ಪೈಸೆ ಕೂಡ ನನಗೆ ಬೇಡ. ದೇವರು ನನಗೆ ಪ್ರತಿಭೆಯನ್ನು ದಯಪಾಲಿಸಿದ್ದಾನೆ. ಅದರಿಂದ ಸಮಾಜಕ್ಕೆ ಲಾಭವಾದರೆ ಅಷ್ಟೇ ಸಾಕು" ಎಂದು ಮುಗ್ಧ ಮಗುವಿನಂತೆ ಮುಗುಳ್ನಗುತ್ತಾರೆ ರೆಂಜಿತ್.
"ಕಾಮಧೇನುವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ತಾಯಿಯ ಹಾಲಿನ ನಂತರ ಹಸುವಿನ ಹಾಲು ನಮಗೆ ಸಿಗುವ ಅತ್ಯಮೂಲ್ಯವಾದ ಪದಾರ್ಥಗಳಲ್ಲಿ ಒಂದು. ಇದಕ್ಕಾಗಿ ಗೋವನ್ನು ನಾವು ಸಂರಕ್ಷಿಸಬೇಕು" ಎಂದು ಒನ್ಇಂಡಿಯಾ ಪ್ರತಿನಿಧಿಗೆ ರೆಂಜಿತ್ ತಿಳಿಸಿದರು.
ಮಾಜಿ ರಾಷ್ಟ್ರಪತಿಯ ಅಭಿಮಾನಿ
ದೇಶದ ಕ್ಷಿಪಣಿ ಪಿತಾಮಹ ಡಾ. ಅಬ್ದುಲ್ ಕಲಾಂ ಅವರ ಬಹುದೊಡ್ಡ ಅಭಿಮಾನಿಯಾಗಿದ್ದಾರೆ ರೆಂಜಿತ್. ತಮ್ಮ ಆರಾಧ್ಯದೈವವನ್ನು ಭೇಟಿಯಾಗುವ ಕನಸನ್ನು ಕೂಡ ಅವರು ಕಂಡಿದ್ದರು. ಕಲಾಂ ಅವರ ಚಿತ್ರವನ್ನು ರಚಿಸಲು ರೆಂಜಿತ್ ಅವರು ಎಂಟು ತಿಂಗಳು ತೆಗೆದುಕೊಂಡಿದ್ದಾರೆ.
"ಬಿಡುವಿನ ಸಮಯವನ್ನು ಚಿತ್ರ ರಚಿಸಲು ಬಳಸುತ್ತೇನೆ. ಕೆಲಬಾರಿ ಮಧ್ಯರಾತ್ರಿಯವರೆಗೂ ಚಿತ್ರ ರಚಿಸಿದ್ದೇನೆ. ಕಲಾಂ ಚಿತ್ರಕ್ಕೆ 'ಮ್ಯೂಸಿಕ್ ಬಿಹೈಂಡ್ ದಿ ಮಿಸೈಲ್ ಹ್ಯಾಂಡ್ಸ್' ಎಂದು ಶೀರ್ಷಿಕೆಯಿಟ್ಟಿದ್ದಾರೆ. ಇದನ್ನು ಅವರಿಗೆ ತೋರಿಸಲು ಹಲವಾರು ವರ್ಷಗಳಿಂದ ಕಾದಿದ್ದೆ" ಎಂದು, ಹೆಂಡತಿ ಮತ್ತು ಎರಡು ತಿಂಗಳ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ರೆಂಜಿತ್ ಅಭಿಮಾನದಿಂದ ಹೇಳುತ್ತಾರೆ.
"ನನ್ನ ಈ ಚಿತ್ರವನ್ನು ನೋಡಿ ಸರ್ (ಕಲಾಂ) ಮೆಚ್ಚಿಕೊಂಡರೆ ಅದೇ ನನಗೆ ಅವರ ಆಶೀರ್ವಾದ ಸಿಕ್ಕಂತೆ" ಎಂದು ಮನದಂಗಿತವನ್ನು ವ್ಯಕ್ತಪಡಿಸಿದ ಅವರು ಏಳು ಮಕ್ಕಳಿಗೆ ಉಚಿತವಾಗಿ ಚಿತ್ರ ಬಿಡಿಸುವ ತರಬೇತಿಯನ್ನು ನೀಡುತ್ತಿದ್ದಾರೆ.
"ಸೇನೆ ನನ್ನ ಜೀವವಿದ್ದಂತೆ. ಅದು ನನಗೆ ಎಲ್ಲವನ್ನೂ ನೀಡಿದೆ. ನನಗೆ ಸರ್ವರೀತಿಯ ಪ್ರೋತ್ಸಾಹವನ್ನು ನೀಡಿದ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳಿಗೆ ಆಭಾರಿಯಾಗಿದ್ದೇನೆ" ಎಂದು ಸ್ಮರಿಸುವುದನ್ನು ರೆಂಜಿತ್ ಮರೆಯುವುದಿಲ್ಲ.
(ಲೇಖಕರು ಹಿರಿಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪತ್ರಕರ್ತರಾಗಿದ್ದಾರೆ. ಒನ್ಇಂಡಿಯಾದ ಸಲಹಾ ಸಂಪಾದಕ (ಡಿಫೆನ್ಸ್) ಆಗಿದ್ದಾರೆ. ಅವರ ಟ್ವಿಟ್ಟರ್ ಖಾತೆ @writetake)