ಪೀಣ್ಯ: ಅನೈತಿಕ ಸಂಬಂಧದ ಶಂಕೆ, ವಕೀಲನಿಗೆ ಗುಂಡಿಕ್ಕಿ ಹತ್ಯೆ
ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲರೊಬ್ಬರನ್ನು ಹತ್ಯೆ ಮಾಡಿದ 78 ವರ್ಷ ವಯಸ್ಸಿನ ವೃದ್ಧರನ್ನು ಬಂಧಿಸಲಾಗಿದೆ. ವಕೀಲ ಹಾಗೂ ವೃದ್ಧರ ಸೊಸೆ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.
ಬೆಂಗಳೂರು, ಜನವರಿ 11: ವಕೀಲರೊಬ್ಬರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು ವಕೀಲ ಅಮಿತ್ ಕೇಶವ್ ಮೂರ್ತಿ ಎಂದು ಗುರುತಿಸಲಾಗಿದೆ. ವಕೀಲ ಅಮಿತ್ ಹತ್ಯೆಗೈದ 78 ವರ್ಷ ವಯಸ್ಸಿನ ಗೋಪಾಲಕೃಷ್ಣ ಗೌಡ ಎಂಬುವವರನ್ನು ಬಂಧಿಸಲಾಗಿದೆ.
ವಕೀಲ ಅಮಿತ್ ಹಾಗೂ ಶ್ರುತಿ ಗೌಡ (32) ಎಂಬುವರ ನಡುವೆ ಪ್ರೀತಿ, ಪ್ರೇಮಕ್ಕೂ ಮೀರಿದ ಸಂಬಂಧವಿತ್ತು. ಈ ವಿಷಯ ಆಕೆಯ ಗಂಡ ರಾಜೇಶ್ ಗೆ ಗೊತ್ತಾಗಿದೆ. ಮನೆ ಗೌರವ ಮಣ್ಣುಪಾಲಾಗುತ್ತಿದೆ ಎಂದೆನಿಸಿ, ಶ್ರುತಿ ಅವರ ಮಾವ ಗೋಪಾಲಕೃಷ್ಣಗೌಡ ಅವರು ವಕೀಲ ಅಮಿತ್ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಸಪ್ತಗಿರಿ ಆಸ್ಪತ್ರೆ ಸೇರಿದ್ದ ಅಮಿತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರುತಿ ಹಾಗೂ ಅಮಿತ್ ನಡುವಿನ ಸಂಬಂಧದ ಬಗ್ಗೆ ಆರೇಳು ತಿಂಗಳುಗಳ ಹಿಂದೆ ಶ್ರುತಿ ಗಂಡ ರಾಜೇಶ್ ಗೆ ತಿಳಿದು ಬಂದಿದೆ. ಶ್ರುತಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಆಕೆ ಅಮಿತ್ ನನ್ನು ಭೇಟಿ ಮಾಡುತ್ತಿದ್ದರು. ಅಮಿತ್ ಗೆ ಮದ್ವೆಯಾಗಿ ಒಬ್ಬ ಮಗನಿದ್ದಾನೆ. ಶ್ರುತಿಗೂ ರಾಜೇಶ್ ರಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಶ್ರುತಿ ಕಾರಿಗೆ ಜಿಪಿಎಸ್ ಸಾಧನ ಅಳವಡಿಸಿ, ಆಕೆ ಮೇಲೆ ರಾಜೇಶ್ ಕಣ್ಣಿಟ್ಟಿದ್ದರು. ಶುಕ್ರವಾರ ಶ್ರುತಿ ಕಾರು ತೆಗೆದುಕೊಂಡು ಹೊರಟಾಗ, ರಾಜೇಶ್ ಹಾಗೂ ಅವರ ಅಪ್ಪ ಗೋಪಾಲಕೃಷ್ಣ ಗೌಡ ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ್ದಾರೆ.
ಅಚಾರ್ಯ ಇನ್ಸ್ಟಿಟ್ಯೂಟ್ ಬಳಿ ಕಾರು ನಿಲ್ಲಿಸಲಾಗಿದೆ. ಅಲ್ಲಿಗೆ ಬಂದ ಅಮಿತ್ ಜತೆ ಶ್ರುತಿ ಮಾತನಾಡುತ್ತಿದ್ದಾಗ, ಅಮಿತ್ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣವೇ ಕಾರು ಓಡಿಸಿಕೊಂಡು ಅಮಿತ್ ನನ್ನು ಸಮೀಪದಲ್ಲಿದ್ದ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ ಶ್ರುತಿಗೆ ಅಮಿತ್ ಇನ್ನು ಉಳಿಯುವುದಿಲ್ಲ ಎಂದು ಮನವರಿಕೆಯಾಗುತ್ತದೆ.

ಅಲ್ಲಿಂದ ಸಮೀಪದ ಲಾಡ್ಜ್ ಗೆ ಬಂದು ರೂಮ್ ನಂಬರ್ 301ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶ್ರುತಿ ಶರಣಾಗುತ್ತಾರೆ. ಆಸ್ಪತ್ರೆಯ ಸಿಸಿಟಿವಿಯಿಂದ ಶ್ರುತಿ ಕಾರಿನ ನಂಬರ್ ಪಡೆದು ಮನೆ ವಿಳಾಸ ಪಡೆದ ಪೊಲೀಸರು, ಟ್ರ್ಯಾಕ್ ಮಾಡಿದಾಗ ಕಾರು ಲಾಡ್ಜ್ ಬಳಿ ನಿಂತಿರುವುದು ಕಾಣುತ್ತದೆ. ಆಕೆ ಇದ್ದ ರೂಮಿನ ಬಾಗಿಲು ಮುರಿದು ಒಳಗೆ ಬಂದು ನೋಡಿದರೆ ಶ್ರುತಿ ಶವವಾಗಿ ಮಲಗಿದ್ದಾರೆ. ನಂತರ ಶ್ರುತಿ ಮಾವ ಗೋಪಾಲಕೃಷ್ಣಗೌಡ ಹಾಗೂ ಶ್ರುತಿ ಪತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.(ಒನ್ ಇಂಡಿಯಾ ಸುದ್ದಿ)












Click it and Unblock the Notifications