ನಟಿ ಹೇಮಶ್ರೀ ಕೊಲೆ ಕೇಸ್ ಮರು ತನಿಖೆ?
ಬೆಂಗಳೂರು, ನ.16: ನಟಿ ಹೇಮಶ್ರೀ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆಕೆ ಪತಿ ಸುರೇಂದ್ರ ಬಾಬುಗೆ ಕಟಂಕ ಮತ್ತೆ ಶುರುವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಪರ ಸಾಕ್ಷಿ ಹೇಳಿದವರ ಬಣ್ಣ ಬಯಲಾಗಿದ್ದು, ಎಲ್ಲರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲಾಗಿತ್ತು ಎಂಬ ಸತ್ಯ ಹೊರಬಿದ್ದಿದೆ. ಹೀಗಾಗಿ ಈ ಪ್ರಕರಣದ ಮರು ತನಿಖೆಗೆ ಆಗ್ರಹಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸುವ ರಾಜ್ಯ ಮಹಿಳಾ ಸಂಘಟನೆಗಳು, ಸುರೇಂದ್ರ ಬಾಬು ತನ್ನ ಪರ ಸಾಕ್ಷಿ ಹೇಳುವುದಕ್ಕೆ ಲಕ್ಷಾಂತರ ರುಪಾಯಿ ಆಮಿಷ ನೀಡಿರುವ ದೃಶ್ಯಗಳು, ಸಾಕ್ಷಿಗಳ ವ್ಯತಿರಿಕ್ತ ವರ್ತನೆ ಬಗ್ಗೆ ಬಲವಾದ ಪುರಾವೆಗಳು ಸಿಕ್ಕಿವೆ ಪ್ರಕರಣದ ಬಗ್ಗೆ ಆಯೋಗ ಮತ್ತೆ ತನಿಖೆ ನಡೆಸಿ ಆರೋಪಿ ಸುರೇಂದ್ರನಿಗೆ ಇನ್ನಷ್ಟು ಶಿಕ್ಷೆ ಪಡೆಯುವಂತೆ ಮಾಡುವುದಾಗಿ ಹೇಳಿದೆ.
ಪ್ರಕರಣ ತನಿಖೆಯಲ್ಲಿದೆ: ಜೈಲಿನಲ್ಲಿರುವ ಸುರೇಂದ್ರಬಾಬು. ಪ್ರಕರಣದ ತನಿಖೆ ಇನ್ನು ಪ್ರಗತಿಯಲ್ಲಿರುವುದರಿಂದ ಪ್ರಮುಖ ಆರೋಪಿಗೆ ಜಾಮೀನು ನೀಡಲು ತ್ವರಿತಗತಿ ನ್ಯಾಯಾಲಯ ನಿರಾಕರಿಸಿತ್ತು. ಕಳೆದ ಒಂದು ವರ್ಷದಿಂದ ಬಾಬು ಜೈಲಿನಲ್ಲಿದ್ದಾನೆ.[ಕೊಲೆ ಪ್ರಕರಣ, ಸುರೇಂದ್ರಗೆ ಜಾಮೀನಿಲ್ಲ]

ಸಾಕ್ಷಿಗಳಿಗೆ ಲಂಚದ ಆಮಿಷ: ಸುರೇಂದ್ರ ಸಾಕ್ಷಿಗಳಿಗೆ ಲಂಚದ ಆಮಿಷ ಒಡ್ಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಆಂಧ್ರಪ್ರದೇಶದ ಮೂಲದ ಮಹೇಶ್, ಮೂವರು ಕಾರ್ಮಿಕರು ಹಾಗೂ ಕೃಷ್ಣ ಎಂಬುವವರೊಂದಿಗೆ ಸುರೇಂದ್ರ ಬಾಬು ಸಹೋದರರಾದ ಮಣಿಪಾಲ್, ಜಯಪಾಲ್ ಹಾಗೂ ಮಧ್ಯವರ್ತಿಯೊಬ್ಬ ಡೀಲ್ ಕುದುರಿಸುವ ದೃಶ್ಯಗಳು ಲಭ್ಯವಾಗಿವೆ.
ಪೊಲೀಸ್ ವಿಚಾರಣೆ ವೇಳೆ ಸುರೇಂದ್ರ ಬಾಬು ವಿರುದ್ಧ ಸಾಕ್ಷಿ ಹೇಳಿದ್ದವರು ಕೋರ್ಟಿನಲ್ಲಿ ಬಾಬು ಪರ ನಿಂತಿದ್ದರು. ಹೀಗಾಗಿ ಪ್ರಕರಣ ಗೊಂದಲಮಯವಾಗಿತ್ತು. ಸಾಕ್ಷಿಗಳನ್ನು ಒಟ್ಟು ಮಾಡಿ ಜಾಮೀನು ಪಡೆಯಲು ಬಾಬು ಯತ್ನಿಸಿರುವ ಬಗ್ಗೆ ಈಗ ಪುರಾವೆ ಸಿಕ್ಕಿರುವುದರಿಂದ ಬಾಬು ಜೈಲಿನಲ್ಲೇ ಇನ್ನಷ್ಟು ಕಾಲದೂಡಬೇಕಾಗುತ್ತದೆ.
ಹೇಮಶ್ರೀ ಪತಿಯಾಗಿರುವ ಸುರೇಂದ್ರ ಬಾಬು, 2012ರ ಅಕ್ಟೋಬರ್ 8ರಂದು ಹೇಮಶ್ರೀಯನ್ನು ಕಾರಿನಲ್ಲಿ ಹೈದರಾಬಾದ್ಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಬಲವಂತವಾಗಿ ತೋಟದ ಮನೆಯಲ್ಲಿ ಆಕೆ ಮೇಲೆ ಕ್ಲೋರೋ ಫಾರಂ ಪ್ರಯೋಗಿಸಿ ಆತ್ಯಾಚಾರವೆಸಗಲು ಪ್ರಯತ್ನಿಸಿದ್ದ. ಕ್ಲೋರೋಫಾರಂ ಪ್ರಮಾಣ ಹೆಚ್ಚಾದ ಕಾರಣ ಹೇಮಶ್ರೀ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಹೇಮಶ್ರೀಗೆ ಕ್ಲೋರೋಫಾರಂ ನೀಡಿದ್ದು ತಾನೇ ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಸುರೇಂದ್ರ ಬಾಬು ಅವರನ್ನು ಬಂಧಿಸಿದ್ದರು. ಸದ್ಯ ಸುರೇಂದ್ರ ಬಾಬು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.












Click it and Unblock the Notifications