ಡ್ರಗ್ಸ್ ಆರೋಪ ನಿರಾಕರಿಸಿದ ನಟ ದಿಗಂತ್
ಬೆಂಗಳೂರು, ಸೆಪ್ಟೆಂಬರ್ 28: ತಮ್ಮ ವಿರುದ್ಧ ಬಂದಿರುವ ಡ್ರಗ್ಸ್ ಸೇವನೆ ಆರೋಪಗಳನ್ನು ಕನ್ನಡ ಚಲನಚಿತ್ರ ನಟ ದಿಗಂತ್ ತಿರಸ್ಕರಿಸಿದ್ದಾರೆ. ಈ ತಮ್ಮನ್ನು ಸಂಪರ್ಕಿಸಿರುವ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ''ತಾವು ಕನಕಪುರದ ಸಮೀಪ ಚಿತ್ರದ ಚಿತ್ರೀಕರಣವೊಂದರಲ್ಲಿ ಬ್ಯುಸಿಯಾಗಿದ್ದು, ತಮಗೂ ತಮ್ಮ ವಿರುದ್ಧ ಬಂದಿರುವ ಡ್ರಗ್ಸ್ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ'' ಎಂದು ತಿಳಿಸಿದ್ದಾರೆ.
ಸೆ. 27ರ ಮಧ್ಯರಾತ್ರಿ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಖ್ಯಾತ ಉದ್ಯಮಿ ದಿ. ಆದಿಕೇಶವುಲು ಅವರ ಮೊಮ್ಮಗ ವಿಷ್ಣುವಿನ ಕಾರು ನಾಲ್ಕು ಕಾರುಗಳನ್ನು ಗುದ್ದಿಕೊಂಡು ಕಡೆಗೆ ಓಮ್ನಿ ಕಾರೊಂದಕ್ಕೆ ಗುದ್ದಿ ಅಪಘಾತವಾಗಿತ್ತು. ಈ ಅಪಘಾತದ ರಭಸಕ್ಕೆ ಓಮ್ನಿ ಕಾರು ಪಲ್ಟಿಯಾಗಿ ಅದರಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಕನ್ನಡ ಸಿನಿ ನಟರ ಡ್ರಗ್ಸ್ ಚಟ ಬಯಲು ಮಾಡಿತೇ ಈ ಅಪಘಾತ ಪ್ರಕರಣ?
ಈ ಅಪಘಾತ ಪ್ರಕರಣದಲ್ಲಿ ವಿಷ್ಣುವಿನ ಜತೆಗೆ ನಟರಾದ ದಿಗಂತ್, ಪ್ರಜ್ವಲ್ ದೇವರಾಜ್ ಕೂಡಾ ಇದ್ದರು. ಅವರೆಲ್ಲರೂ ಪಾನಮತ್ತರಾಗಿದ್ದಲ್ಲದೆ, ಗಾಂಜಾ ಸೇವಿಸಿದ್ದರೆಂದೂ ಹೇಳಲಾಗಿದೆ.
ನಟ ದಿಗಂತ್ ಪ್ರತಿಕ್ರಿಯೆ
ಈ ಎಲ್ಲದರ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ದಿಗಂತ್ ಅವರು ಪ್ರತಿಕ್ರಿಯಿಸಿ, ''ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ನನಗೆ ಪರಿಚಯವಿರುವುದು ನಿಜ. ಆದರೆ, ಘಟನೆ ನಡೆದಾಗ ನಾವು ಅವರೊಂದಿಗೆ ಇರಲಿಲ್ಲ. ನಾವು ಅವರಿಗೆ ಪರಿಚಯ ಎಂಬ ಕಾರಣಕ್ಕೇ ನನ್ನ ಹಾಗೂ ಪ್ರಜ್ವಲ್ ಅವರ ಹೆಸರುಗಳನ್ನು ಈ ಕೇಸಿನಲ್ಲಿ ತಳಕು ಹಾಕುವುದು ಸರಿಯಲ್ಲ'' ಎಂದರು.
ಪ್ರಜ್ವಲ್ ಬಗ್ಗೆ ಪ್ರೊಟೆಕ್ಷನ್
ಪ್ರಜ್ವಲ್ ಬಗ್ಗೆ ವಿಚಾರಿಸಿದಾಗ ಪ್ರತಿಕ್ರಿಯಿಸಿದ ದಿಗಂತ್, ''ನಾನು ಹಾಗೂ ಪ್ರಜ್ವಲ್ ಉತ್ತಮ ಸ್ನೇಹಿತರು. ಪ್ರಜ್ವಲ್ ಅವರು ಕಳೆದ ನಾಲ್ಕೈದು ದಿನಗಳಿಂದ ಷೂಟಿಂಗ್ ಗಾಗಿ ಗೋವಾದಲ್ಲಿದ್ದಾರೆ. ಹಾಗಿರುವಾಗ ಅವರು ವಿಷ್ಣು ಜತೆಯಲ್ಲಿ ಸೆ. 27ರ ರಾತ್ರಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದರು.
ನಿಜವಾಗ್ಲೂ ಎಸ್ಕೇಪ್ ಆಗಿದ್ರಾ ಇವರು?
ವಿಷ್ಣುವಿನ ಕಾರಿನಲ್ಲಿ ವಿಷ್ಣು ಜತೆಗೆ ನಟ ದಿಗಂತ್, ನಟ ಪ್ರಜ್ವಲ್ ಇದ್ದು ಇವರೆಲ್ಲರೂ ಮಾದಕ ದ್ರವ್ಯ ಸೇವಿಸಿದ್ದನ್ನು ಜನರು ನೋಡಿದ್ದಾಗಿ ಸೆ. 28ರ ಬೆಳಗ್ಗೆ ವಾಹಿನಿಯೊಂದು ವರದಿ ಮಾಡಿತ್ತು. ರೊಚ್ಚಿಗೆದ್ದ ಜನರು ಇವರ ಮೇಲೆ ಹಲ್ಲೆ ಮಾಡಲು ಬಂದ ಕೂಡಲೇ ಇವರೆಲ್ಲರೂ ಎಸ್ಕೇಪ್ ಆಗಿರುವುದಾಗಿಯೂ ವರದಿಯಾಗಿತ್ತು.
ಗಾಂಜಾ ಸಿಕ್ಕಿದ್ದು ಸುಳ್ಳೇ?
ಅಲ್ಲದೆ ವಿಷ್ಣುವಿನ 2.60 ಕೋಟಿ ರು. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರಿನಿಂದ 850 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮತ್ತೊಂದು ವಾಹಿನಿ ವರದಿ ಮಾಡಿತ್ತು.