ಬಿಬಿಎಂಪಿ ಚುನಾವಣೆ ಮೇಲೆ ಆಮ್ ಆದ್ಮಿ ಕಣ್ಣು
ಬೆಂಗಳೂರು, ಏ. 24 : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿಸಿರುವ ಆಮ್ ಆಮ್ ಆದ್ಮಿ ಪಕ್ಷ, 2015ರಲ್ಲಿ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಬೆಂಗಳೂರು ಉತ್ತರ, ದಕ್ಷಿಣ ಮತ್ತು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸುವಾಗಲೇ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಪ್ರಾಥಮಿಕ ಕೆಲಸಗಳನ್ನು ಆಮ್ ಆದ್ಮಿ ಪಕ್ಷ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪೃಥ್ವಿ ರೆಡ್ಡಿ "ನನ್ನ ಹಣ ನನಗೆ ಲೆಕ್ಕ ಬೇಕು" ಎಂಬ ಅಭಿಯಾನದ ಅಡಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ "ನನ್ನ ಹಣ ನನಗೆ ಲೆಕ್ಕ ಬೇಕು" ಅಭಿಯಾನವನ್ನು ಅಭಿಯಾನವನ್ನು ಕೆಲವು ದಿನಗಳಲ್ಲಿ ಆರಂಭಿಲಿದೆ. ಪಕ್ಷದ ಕಾರ್ಯಕರ್ತರು ಪ್ರತಿ ವಾರ್ಡ್ ಗಳಲ್ಲಿ ಇರುವ ಸಮಸ್ಯೆಗಳು, ಬಿಬಿಎಂಪಿಯಿಂದ ವಾರ್ಡ್ ಗೆ ಖರ್ಚು ಮಾಡಿರುವ ಹಣದ ಕುರಿತು ಮಾಹಿತಿ ಸಂಗ್ರಹಿಸುವ ಪ್ರಾಥಮಿಕ ಕಾರ್ಯವನ್ನು ಚುನಾವಣೆಗೆ ಮೊದಲು ಆರಂಭಿಸಲಿದ್ದಾರೆ. [ಸೆಪ್ಟೆಂಬರ್ ವರೆಗೆ ಮೇಯರ್ ಸ್ಥಾನಕ್ಕೆ ಧಕ್ಕೆ ಇಲ್ಲ]
ರಾಜಕೀಯವನ್ನು ಮೊದಲು ಪಾಲಿಕೆ ಚುನಾವಣೆ ಮೂಲಕ ಆರಂಭಿಸಬೇಕು. ಆದರೆ, ಮೊದಲು ನಾವು ಲೋಕಸಭೆ ಚುನಾವಣೆ ಎದುರಿಸಬೇಕಾಯಿತು. ಇದರಿಂದ ನಮಗೆ ಬೆಂಬಲ ಮತ್ತು ಅನುಭವ ದೊರಕಿದೆ. ಎಲ್ಲಾ ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ಆರು ತಿಂಗಳಿನಲ್ಲಿ ಆರಂಭಿಸಲಿದ್ದೇವೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನ ಜನರು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಧಿಕಾರವನ್ನು ನೋಡಿದ್ದಾರೆ. ಮಧ್ಯಮ ವರ್ಗದ ಜನರು ಬಿಬಿಎಂಪಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನೋಡಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ಜನರು ಆಮ್ ಆದ್ಮಿ ಪಕ್ಷ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ಪಕ್ಷದ ನಾಯಕ ಮಹಾಂತೇಶ್ ಅರಳಿ ತಿಳಿಸಿದರು.
2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಜೊತೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು 198 ವಾರ್ಡ್ ಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಿಂದ ಬಿಬಿಎಂಪಿ ಚುನಾವಣೆ ರಂಗೇರುವುದು ಖಂಡಿತ.












Click it and Unblock the Notifications