ಶೀಘ್ರವೇ 5 ಸಾವಿರ ಸರ್ವೆಯರ್ ಗಳ ನೇಮಕ: ಕಾಗೋಡು
ಬೆಂಗಳೂರು, ಮೇ 18 : ಶೀಘ್ರವೇ ಐದು ಸಾವಿರ ಸರ್ವೆಯರ್ ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಹಸೀಲ್ದಾರ್ ಗಳ ಕೊರತೆ ನೀಗಿಸಲು ಕೆಪಿಎಸ್ ಸಿ ಮೂಲಕ ಸರ್ವೆಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ" ಎಂದರು.
ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ಆಯಾಯ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅರಣ್ಯ ಭೂಮಿ ವಿವಾದವನ್ನು ಮೂರು ತಿಂಗಳಲ್ಲಿ ಪರಿಹರಿಸಲು ಸೂಚನೆ ನೀಡಲಾಗಿದೆ. ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಿ ಸಾಗುವಳಿ ಪತ್ರ ನೀಡಬೇಕಿದೆ.
ಅದಕ್ಕಾಗಿ ನಾನೇ ಜಿಲ್ಲಾ ಪ್ರವಾಸ ಕೈಗೊಂಡು ಹಕ್ಕುಪತ್ರ ನೀಡುವುದನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು. ಇನ್ನೂ 11 ಲಕ್ಷ ರೈತರಿಗೆ ಬರ ಪರಿಹಾರ ಧನ ವಿತರಿಸಬೇಕಾಗಿದೆ.
ಪರಿಹಾರ ಒದಗಿಸಲು ವಿಳಂಬವಾಗಿರುವುದಕ್ಕೆ ರೈತರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ ಅವರು, ಹಿಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಮತ್ತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ.
ಇನ್ನು 15 ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿಯ ತನಕ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.