ಬಳ್ಳಾರಿ ವಿಮ್ಸ್ ದುರಂತ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವ
ಬಳ್ಳಾರಿ, ಸೆಪ್ಟೆಂಬರ್, 18: "ವಿಮ್ಸ್ನಲ್ಲಿನ ಸಾವು ಪ್ರಕರಣ ವಿದ್ಯುತ್ ಸ್ಥಗಿತದಿಂದ ಆಗಿಲ್ಲ ಎಂಬುದು ಕಂಡು ಬರುತ್ತಿದ್ದು, ಡಾ. ಸ್ಮಿತಾ ನೇತೃತ್ವದ ತಂಡ ವರದಿ ನೀಡಿದ ಬಳಿಕ ಮುಂದಿನ ಹಂತದ ಕ್ರಮ ಜರುಗಿಸಲಾಗುವುದು. ಒಂದು ವೇಳೆ ವಿಮ್ಸ್ ಆಡಳಿತದಿಂದ ತಪ್ಪಾಗಿದ್ದರೆ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಶನಿವಾರ ರಾತ್ರಿ ವಿಮ್ಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸಚಿವರು, "ವಿಮ್ಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ಮೇಲ್ನೋಟಕ್ಕೆ ವಿದ್ಯುತ್ ಸಮಸ್ಯೆಯಿಂದ ಅವಘಡ ಆಗಿಲ್ಲ ಎಂಬುದು ತಿಳಿದು ಬರುತ್ತಿದೆ. ತನಿಖಾ ವರದಿ ಬಳಿಕ ಮುಂದಿನ ಹಂತ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಸಿದ್ದರಾಮಯ್ಯನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಸ್ಥಿತಿ ನನಗೆ ಬಂದಿಲ್ಲ.
ಯಾರೋ ಕಟ್ಟಿದ ಗೂಡಿನಲ್ಲಿ ಹೋಗಿ ರಾಜಕಾರಣ ಮಾಡುವ ಸ್ಥಿತಿ ನನ್ನದಲ್ಲ" ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.

"ನಾನು ಸುಳ್ಳು ಹೇಳಿ ರಾಜಕೀಯ ಮಾಡಿಕೊಂಡು ಬಂದಿಲ್ಲ. ನಾನು ಸುಳ್ಳು ಹೇಳಿ ರಾಜಕೀಯ ಮಾಡಿದ್ದರೆ ದೊಡ್ಡ ವ್ಯಕ್ತಿ ಆಗುತ್ತಿದೆ. ಸಿದ್ದಾಂತದ ಮೇಲೆ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಒಂದು ವೇಳೆ ಅಂತಹ ಸ್ಥಿತಿ ಬಂದರೆ ರಾಜಕಾರಣವನ್ನು ಬಿಡುತ್ತೇನೆ" ಎಂದರು.
"ವಿಮ್ಸ್ ಸಾವು ಪ್ರಕರಣ ವಿದ್ಯುತ್ ಸ್ಥಗಿತದಿಂದ ಆಗಿಲ್ಲ ಎಂಬುದು ಕಂಡು ಬರುತ್ತಿದ್ದು, ವೈದ್ಯಾಧಿಕಾರಿಗಳ ಸಭೆ ಕರೆದು ಮಾತನಾಡಿದ್ದೇನೆ. ವಿದ್ಯುತ್ ವ್ಯತ್ಯಯದಿಂದ ಯಾರೂ ಕೂಡ ಸಾವನ್ನಪ್ಪಿಲ್ಲ" ಎಂದು ಬಿ. ಶ್ರೀರಾಮುಲು ಮತ್ತೊಮ್ಮೆ ಹೇಳಿದರು.
ಉನ್ನತ ಮಟ್ಟದ ತನಿಖಾ ಸಮಿತಿ; "ಈ ಪ್ರಕರಣದ ಬಗ್ಗೆ ತನಿಖೆಗೆ ಸರ್ಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಿದೆ. ಡಾ. ಸ್ಮಿತಾ ನೇತೃತ್ವದ ತಂಡ ಕೂಡ ಇನ್ನು ವರದಿ ಕೊಡಬೇಕಾಗಿದೆ. ತನಿಖಾ ಸಮಿತಿ ವರದಿ ನೀಡಿದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು" ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಸುಧಾಕರ್ ವಿರುದ್ಧ ಆಕ್ರೋಶ; ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷದ ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಮಾತನಾಡಿ, "ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದರು. ಅವಿವೇಕಿ ವಿಮ್ಸ್ ನಿರ್ದೇಶಕ, ಮಂತ್ರಿ ಸುಧಾಕರ್ ರಾಜೀನಾಮೆ ಕೊಡಬೇಕು" ಎಂದು ಶಾಸಕ ನಾಗೇಂದ್ರ ಆಗ್ರಹಿಸಿದ್ದರು.
ವಿಮ್ಸ್ನಲ್ಲಿ ನಡೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಪ್ರತಿಭಟನೆ ಸಂರ್ಭದಲ್ಲಿ ಮಾತನಾಡಿದ ಅವರು, "ಬಡವರ ಜೀವ ಕಾಪಾಡುವುದಕ್ಕೆ ಆಗಿಲ್ಲ ಎಂದರೆ ಶಾಸಕರಾಗಿ ಏಕಿರಬೇಕು?. ಮಂತ್ರಿಗಳಾಗಿ ಏಕಿರಬೇಕು?. ರಾಜೀನಾಮೆ ಕೊಟ್ಟು ಮನೆಗಳಿಗೆ ಹೋಗಬೇಕು. ನಮ್ಮ ಬಳ್ಳಾರಿಯಲ್ಲಿ ಈಗಲೂ ಬಡ ಜನರು ಸಾವನ್ನಪ್ಪುತ್ತಿದ್ದಾರೆ. ನಿಮ್ಮ ಸ್ವಾರ್ಥಕ್ಕಾಗಿ ಹಾಗೂ ಇಲ್ಲಿ ಹಣ ಲೂಟಿ ಮಾಡಲು ಯಾರನ್ನೋ ಅಧಿಕಾರಿಯನ್ನು ಕೂರಿಸುತ್ತೀರಾ? ವಿಮ್ಸ್ನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಕಾಡಾನೆಗಳು ಯಾವ ರೀತಿ ಕಾಡನ್ನು ಧ್ವಂಸ ಮಾಡುತ್ತವೆಯೋ, ಹಾಗೆಯೇ ಬಳ್ಳಾರಿಯನ್ನು ಬಿಜೆಪಿಯವರು ಧ್ವಂಸ ಮಾಡುತ್ತಿದ್ದಾರೆ" ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹ; ವಿಮ್ಸ್ನಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತರಾಗಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮಾತನಾಡಿ, "ಮೃತ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಆದರೆ ಕೇವಲ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆವಹಿಸಬೇಕು" ಎಂದರು.












Click it and Unblock the Notifications