ಸ್ವಪಕ್ಷದವರಿಗೆ ಜಾತಿ ನಿಂದನೆ ಮಾಡಿದರಾ ಹೂವಿನಹಡಗಲಿ 'ಕೈ' ಶಾಸಕ?
ವಿಜಯನಗರ, ಏಪ್ರೀಲ್ 6: ಹರಪನಹಳ್ಳಿ ಕಾಂಗ್ರೆಸ್ ಪಕ್ಷದ ಮುಖಂಡನ ಮೇಲೆ ಹೂವಿನಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಎದುರೇ, ಸ್ವಪಕ್ಷದ ಮುಖಂಡರನ್ನು ಜಾತಿ ನಿಂದನೆ ಮಾಡಿರುವುದು ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಉಂಟುಮಾಡಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶಾಸಕ ಪಿಟಿ. ಪರಮೇಶ್ವರ್ ನಾಯ್ಕ್ ವಿರುದ್ಧ ಕಾಂಗ್ರೆಸ್ ಮುಖಂಡ ಎಂ.ವಿ ಅಂಜಿನೆಪ್ಪ ಜಾತಿ ನಿಂದನೆ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೂವಿನಹಡಗಲಿಗೆ ಹೋಗುವ ಮಾರ್ಗದಲ್ಲಿ ಹರಪನಹಳ್ಳಿಯಲ್ಲಿ ಕೈ ಮುಖಂಡರು ಸ್ವಾಗತಿಸಿದರು. ಇದರಿಂದ ಕೆರಳಿದ ಶಾಸಕ ಅವನ್ಯಾರೋ "ವಡ್ಡ' ಅಂಜಿನಪ್ಪ ಮಾತು ಕೇಳ್ತಿರಾ ಎಂದು ಜಾತಿ ನಿಂದನೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಅಂಜಿನೆಪ್ಪ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ, ದಲಿತರ, ಶೋಷಿತರ ಪರ ಇದೆ. ಇಂತಹ ಪಕ್ಷದ ಶಾಸಕರೇ ಕೇಳ ವರ್ಗದವರನ್ನೂ ಅಪಮಾನ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಭೋವಿ ಸಮುದಾಯದ ಕ್ಷಮೆ ಕೇಳುವಂತೆ ಒತ್ತಾಯ ಮಾಡಲಾಗಿದೆ.
ಹರಪನಹಳ್ಳಿ ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಹಣ, ಅಧಿಕಾರದ ಮದ ಇವರಿಗೆ ಹೆಚ್ಚಾಗಿದೆ ಎಂದು ಆಕ್ರೋಶ ಹೊರಹಾಕಿದ್ದು, ಖಾಸಗಿ ಕಾರ್ಯಕ್ರಮದ ನಿಮಿತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೂವಿನಹಡಗಲಿಗೆ ಬಂದಾಗ ಈ ಘಟನೆ ನಡೆದಿದೆ.