ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ; ಆನಂದ್ ಸಿಂಗ್ ಹೇಳಿದ್ದೇನು?
ಬಳ್ಳಾರಿ, ನವೆಂಬರ್ 18 : ಬಳ್ಳಾರಿ ಜಿಲ್ಲೆಯ ವಿಜಯನಗರ ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರಲಿದೆ. ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ರಚನೆ ಮಾಡಲು ಒಪ್ಪಿಗೆ ನೀಡಿದೆ.
ಹೊಸಪೇಟೆ ವಿಜಯನಗರ ಶಾಸಕ ಆನಂದ್ ಸಿಂಗ್ ವಿಜಯನಗರ ಜಿಲ್ಲೆಯಾಗಬೇಕು ಎಂದು ಹೋರಾಟ ಆರಂಭಿಸಿದ್ದರು. ಅವರ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ವಿಜಯನಗರ ಜಿಲ್ಲೆ ರಚನೆಗೆ ಬುಧವಾರ ಒಪ್ಪಿಗೆ ಕೊಟ್ಟಿದೆ.
"ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಬಹುದಿನದ ಬೇಡಿಕೆ ಈಡೇರಿದೆ. ಹಿಂದೂ ಸಾಮಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಐತಿಹಾಸಿಕ ತೀರ್ಮಾನ ಮಾಡದಂತಾಗಿದೆ" ಎಂದು ಹೇಳಿದ್ದಾರೆ.
ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಬಿಜೆಪಿ ಶಾಸಕರಲ್ಲಿಯೇ ವಿಭಿನ್ನ ಅಭಿಪ್ರಾಯಗಳಿವೆ. ಶಾಸಕ ಸೋಮಶೇಖರ ರೆಡ್ಡಿ ಅವರು, "ಮುಖ್ಯಮಂತ್ರಿಗಳು ಆತುರಕ್ಕೆ ಬಿದ್ದರು" ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನನ್ನ ಒಬ್ಬನ ಬೇಡಿಕೆಯಲ್ಲ
"ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬುದು ನನ್ನ ಒಬ್ಬನ ಬೇಡಿಕೆ ಆಗಿರಲಿಲ್ಲ. ಬೇಡಿಕೆ ಇಟ್ಟವರ ಧ್ವನಿಯಾಗಿ ನಾನು ಸರ್ಕಾರಕ್ಕೆ ಮನವಿ ಮಾಡಿದ್ದೆ. ಆ ಮನಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಜಿಲ್ಲೆ ಆಗಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದಾರೆ" ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ
"ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕೆಲಸಗಳನ್ನು ಮಾಡಲಾಗುತ್ತದೆ. ತಾಂತ್ರಿಕವಾಗಿ ಯಾವ-ಯಾವ ತಾಲೂಕುಗಳನ್ನು ಹೊಸ ಜಿಲ್ಲೆಗೆ ಸೇರಿಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತಾರೆ" ಎಂದು ಆನಂದ್ ಸಿಂಗ್ ತಿಳಿಸಿದರು.

ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ
ಜಿಲ್ಲಾ ರಚನೆ ವಿರೋಧಿಸಿದ ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ್ ಸಿಂಗ್, "ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಇದು ಇಡೀ ರಾಜ್ಯದ ತೀರ್ಮಾನವಾಗಿದೆ. ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಶ್ರೀರಾಮುಲು ಅವರು ಸಹ ಹೆಮ್ಮೆ ಪಟ್ಟರು. ವಿಜಯನಗರ ಇತಿಹಾಸದ ಪುಟ ಸೇರಬೇಕಾದರೆ ಜಿಲ್ಲೆ ಆಗುವುದು ಸೂಕ್ತವಾಗಿತ್ತು" ಎಂದರು.

ಬಳ್ಳಾರಿ ಜಿಲ್ಲೆ ವಿಭಜನೆ
ವಿಜಯನಗರ ಜಿಲ್ಲಾ ರಚನೆಗೆ 2019ರಿಂದಲೇ ಹೋರಾಟ ನಡೆಯುತ್ತಿತ್ತು. ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸಿ ಹೊಸ ಜಿಲ್ಲೆಗೆ ಸೇರಿಸುವ ಪ್ರಸ್ತಾವನೆ ಇದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಅಧಿಕೃತ ಆದೇಶ ಇನ್ನೂ ಹೊರಬರಬೇಕಿದೆ.












Click it and Unblock the Notifications