ದರೋಜಿ ಕರಡಿಧಾಮದಲ್ಲಿ ಬೃಹತ್ ಹಸಿರೀಕರಣ ಯೋಜನೆ
ವಿಜಯನಗರ, ಜೂನ್ 18; ದರೋಜಿ ಕರಡಿಧಾಮವನ್ನು ಸಂಪೂರ್ಣವಾಗಿ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಬೃಹತ್ ಯೋಜನೆಯನ್ನ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಸಮೀಪದಲ್ಲಿ ಕರಡಿಧಾಮವಿದೆ.
ಒಟ್ಟು 8,272.80 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕರಡಿಧಾಮವು ಬೆಟ್ಟ, ಗುಡ್ಡ, ಕುರುಚಲು ಕಾಡಿನಿಂದ ಅವರಿಸಿಕೊಂಡಿದೆ. ಈ ಪೈಕಿ 86 ಹೆಕ್ಟೇರ್ ಪ್ರದೇಶದಲ್ಲಿ 20 ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಅರಳಿ, ಅತ್ತಿ, ಆಲ, ನೇರಳೆ, ಸಿಹಿಹುಣಸೆ, ನೆಲ್ಲಿ, ಸೀತಾಫಲ, ಪೇರಲ, ಚಳ್ಳೆ, ಬಸರಿ, ಬೇವಿನ ಸಸಿಗಳು ಇವುಗಳಲ್ಲಿ ಸೇರಿವೆ.
ತಿಂಗಳ ಹಿಂದೆಯೇ ಗುಂಡಿಗಳನ್ನು ತೋಡುವ ಕೆಲಸ ಆರಂಭಿಸಲಾಗಿತ್ತು. ಈಗ ಆ ಗುಂಡಿಗಳಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಇನ್ನೆರಡು ವಾರಗಳಲ್ಲಿ ಸಸಿ ನೆಡುವ ಕೆಲಸ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.
ಮುಂಗಾರು ಮಳೆ ಶುರುವಾಗುವುದರೊಳಗೆ ಕೆಲಸ ಮುಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆಯೇ ಕೆಲಸ ನಡೆಯುತ್ತಿದೆ.
ಈ ಕರಡಿಧಾಮದಲ್ಲಿ ಕರಡಿ, ಗುಳ್ಳೇನರಿ, ಮೊಲ, ಅಳಿಲು, ಕಾಡು ಹಂದಿ, ಚಿರತೆ, ಕಾಡು ಬೆಕ್ಕು ಸೇರಿದಂತೆ ಹೀಗೆ ಇನ್ನಿತರ ವಿವಿಧ ಜಾತಿಯ ಪ್ರಾಣಿಗಳಿವೆ. ನವಿಲು, ರತ್ನ ಪಕ್ಷಿಗಳು ಸೇರಿದಂತೆ 180 ಜಾತಿಯ ಪಕ್ಷಿಗಳಿವೆ, 50 ಬಗೆಯ ಸರಿಸೃಪಗಳಿವೆ.

ವಿವಿಧ ಜಾತಿಯ ಸಸ್ಯಗಳ ನಾಟಿ
ಕಾರ, ಕವಳೆ, ಬಾರೆ, ಜಾನ, ಕಕ್ಕೆ. ಗೊರವಿ, ಸೀತಾಫಲ ಸೇರಿ 28 ಜಾತಿಯ ಗಿಡ ಮರಗಳು ಕರಡಿಧಾಮದಲ್ಲಿವೆ. ಇಂಗುಗುಂಡಿ, ಬದು, ಸಣ್ಣ ಕೆರೆಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ಈಗಾಗಲೇ ಸಾಕಷ್ಟು ವೃದ್ಧಿಯಾಗಿದೆ. ಈಗ ಬೃಹತ್ ಅರಣ್ಯೀಕರಣದಿಂದ ಇಡೀ ಧಾಮದ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಕಾಡು ಹಂದಿ, ಮೊಲ ಸೇರಿದಂತೆ ಇತರ ಕುರುಚಲು ಕಾಡಿಗೆ ಸೀಮಿತವಾಗಿದ್ದ ಧಾಮದಲ್ಲಿ ಹಸಿರು ಕಾಣಿಸಿಕೊಳ್ಳಲಿದೆ.

ಸಫಾರಿ ಮಾಡುವುದಕ್ಕೆ ರಸ್ತೆ
ಇಡೀ ಕರಡಿಧಾಮದಲ್ಲಿ ಸಫಾರಿ ಮಾಡುವುದಕ್ಕಾಗಿ ಒಟ್ಟು 13 ಕಿ.ಮೀ. ರಸ್ತೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ಗುರುತು ಮಾಡಲಾಗಿದೆ. ಕಚ್ಚಾ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಾಣಿ, ಪಂಗಳ ವೀಕ್ಷಣೆ, ನೇಚರ್ ಕ್ಯಾಂಪಿಗೆ ಅವಕಾಶ ನೀಡಲಾಗುತ್ತದೆ. ಹಂತ-ಹಂತದಲ್ಲಿ ಹಸಿರೀಕರಣ ಯೋಜನೆಯೂ ಪೂರ್ಣಗೊಳ್ಳಲಿದೆ.

86 ಹೆಕ್ಟೇರ್ ಪ್ರದೇಶ
ಕರಡಿಧಾಮದ ಒಟ್ಟು ವಿಸ್ತೀರ್ಣ 8,272.80 ಹೆಕ್ಟೇರ್. ಈ ವರ್ಷದಲ್ಲಿ ಅರಣ್ಯೀಕರಣ ಮಾಡಲು ಉದ್ದೇಶಿಸಿರುವುದು 86 ಹೆಕ್ಟೇರ್ ಪ್ರದೇಶದಲ್ಲಿ. ವಿವಿಧ ಜಾತಿಯ 23,000 ಸಸಿಗಳನ್ನು ನೆಡಲಾಗುತ್ತದೆ. ಕರಡಿಧಾಮದಲ್ಲಿ ಅರಣ್ಯೀಕರಣ ಮಾಡುವುದರಿಂದ ಹಳ್ಳಗಳು ಮೈದುಂಬಿ ಹರಿಯುತ್ತವೆ. ಇದರಿಂದಾಗಿ ಇಲ್ಲಿ ನೆಲೆಸಿರುವ ಪ್ರಾಣಿ, ಪಕ್ಷಿಗಳು ಆಹಾರ, ನೀರು ಅರಸಿಕೊಂಡು ಬೇರೆಡೆ ಹೋಗುವುದು ತಪ್ಪುತ್ತದೆ. ಅವುಗಳ ಸಂತತಿ ಬೆಳೆಯುವುದಕ್ಕೆ ಅನುಕೂಲವಾಗಲಿದೆ. ಹಲವಾರು ಜಾತಿಯ ಗಿಡ ಮರಗಳು ಇರುವುದರಿಂದ ವಿವಿಧ ರೀತಿಯ ಹಣ್ಣುಗಳು ಲಭ್ಯವಾಗುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ನೀಗುತ್ತಿದೆ.

ಸಂಪೂರ್ಣ ಹಸಿರೀಕರಣ
ಕರಡಿಧಾಮದಲ್ಲಿ ಹಲವಾರು ಬಗೆಯ ಗಿಡ ಮರಗಳನ್ನು ನೆಡುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನೀಗಲಿದೆ. ಹಲವು ಜಾತಿಯ ಗಿಡಮರಗಳಿವೆ. 20 ಹೊಸ ಬಗೆಯ ಒಟ್ಟು 23.000 ಸಸಿಗಳನ್ನು ನೆಡಲಾಗುತ್ತಿದೆ.
"ಕರಡಿ ಸೇರಿದಂತೆ ಧಾಮದಲ್ಲಿ ನೆಲೆಸಿರುವ ವಿವಿಧ ಜಾತಿಯ ಪಕ್ಷಿಗಳು, ಪ್ರಾಣಿಗಳ ಸಂತತಿಗೆ ಯಥೇಚ್ಛ ಆಹಾರ ದೊರಕಿಸಿಕೊಡಲು ಸಸಿ ನೆಡಲಾಗುತ್ತಿದೆ" ಎಂದು ಕರಡಿಧಾಮದ ಆರ್ಎಫ್ಓ ಉಷಾ ಆರ್. ಹೇಳಿದ್ದಾರೆ.











Click it and Unblock the Notifications