ಹೊಸಪೇಟೆ; ಸಾರಿಗೆ ನೌಕರರ ಮುಷ್ಕರ, 3.94 ಕೋಟಿ ನಷ್ಟ
ಹೊಸಪೇಟೆ, ಏಪ್ರಿಲ್ 19; ಸಾರಿಗೆ ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗಕ್ಕೆ ಇದರಿಂದಾಗಿ 3.94 ಕೋಟಿ ನಷ್ಟ ಸಂಭವಿಸಿದೆ. ಏಪ್ರಿಲ್ 7ರಂದು ಆರಂಭವಾದ ಮುಷ್ಕರ ಇನ್ನೂ ನಿಂತಿಲ್ಲ.
6ನೇ ವೇತನ ಆಯೋಗದ ಶಿಫಾರಸು ಪರಿಗಣಿಸುವುದು ಮತ್ತು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಏಪ್ರಿಲ್ 7ರಿಂದ ಸಾರಿಗೆ ನೌಕರರು ಮುಷ್ಕರವನ್ನು ನಡೆಸುತ್ತಿದ್ದಾರೆ.
ಹೊಸಪೇಟೆ ವಿಭಾಗ ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ ಸೇರಿದಂತೆ ಒಟ್ಟು 5 ಡಿಪೋಗಳನ್ನು ಒಳಗೊಂಡಿದೆ. 6 ಡಿಪೋಗಳನ್ನು ಸೇರಿದಂತೆ ಒಟ್ಟು ನೌಕರರ ಸಂಖ್ಯೆ 19,947.

ಆದಾಯದ ನಷ್ಟ: ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ ಸೇರಿದಂತೆ ವಿಭಾಗದಕ್ಕೆ ಏಪ್ರಿಲ್ 7 ರಿಂದ ಇಲ್ಲಿಯ ತನಕ ಬರೋಬ್ಬರಿ 3.94 ಕೋಟಿ. ರೂ ನಷ್ಟವಾಗಿದೆ.
ಪ್ರತಿದಿನ ಒಂದು ಲಕ್ಷದಿಂದ ಐವತ್ತು ಸಾವಿರ ಕಿ.ಮೀ ಬಸ್ ಗಳು ಸಂಚರಿಸಬೇಕಿತ್ತು ಕೋವಿಡ್ ಮತ್ತು ಮುಷ್ಕರದ ಹಿನ್ನಲೆಯಿಂದ ನಿತ್ಯ 50-60 ಸಾವಿರ ಕಿ. ಮೀ. ಮಾತ್ರ ಬಸ್ ಗಳು ಸಂಚರಿಸುತ್ತಿವೆ.
ಕಳೆದ 13 ದಿನಗಳಿಂದ ಬಸ್ ಗಳು ಕ್ರಮಿಸಬೇಕಾಗಿದ್ದು 18,88,000 ಕಿ. ಮೀ.. ಆದರೆ, ಇದುವರಿಗೂ 4,09,000 ಕಿ. ಮೀ. ಮಾತ್ರ ಸಂಚಾರ ನಡೆಸಿವೆ. ಹೊಸಪೇಟೆ ವಿಭಾಗದಿಂದ ಪ್ರತಿ ನಿತ್ಯ 45-48 ಲಕ್ಷ ರೂ. ಆದಾಯ ಬರುತಿತ್ತು, ಈಗ ನಿತ್ಯ 15 ರಿಂದ 16 ಲಕ್ಷ ರೂ. ಆದಾಯ ಬರುತ್ತಿದೆ.
ಬಸ್ ಸಂಚಾರ: ಮುಷ್ಕರ ಆರಂಭವಾದ ದಿನದಿಂದ ಒಟ್ಟು 200ಕ್ಕೂ ಅಧಿಕ ಬಸ್ಗಳು ಸಂಚಾರ ನಡೆಸಿವೆ. ಇದುವರೆಗೂ ಕರ್ತವ್ಯ ಲೋಪದ ಆರೋಪದ ಮೇಲೆ 4 ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಬಸ್ ಗಳಿಗೆ ಕಲ್ಲು ತೂರಿದವರ ವಿರುದ್ಧ ಮತ್ತು ಮುಷ್ಕರಕ್ಕೆ ಪ್ರಚೋದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಆರಂಭವಾದಗಿನಿಂದ ಹೊಸಪೇಟೆ ವಿಭಾಗದಿಂದ ಇದುವರೆಗೂ 9 ಜನ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
"ನಮ್ಮ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ. ನಿತ್ಯವು 70 ರಿಂದ 80 ಜನ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಹೊಸಪೇಟೆ ನಿಯಂತ್ರಣಧಿಕಾರಿ ಜಿ. ಶೀನಯ್ಯ ಹೇಳಿದ್ದಾರೆ.












Click it and Unblock the Notifications