ಬಳ್ಳಾರಿಯಲ್ಲಿ ವಿಜಯದಶಮಿ ಆಚರಿಸುವುದಕ್ಕೆ ರೆಡ್ಡಿಗೆ ಕೋರ್ಟ್ ಸಮ್ಮತಿ
ಬಳ್ಳಾರಿ, ಸೆಪ್ಟೆಂಬರ್ 22 : ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಿಜಯದಶಮಿ ಆಚರಣೆ ಮಾಡಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಮೂರು ದಿನಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1ರಂದು ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ವಿಜಯದಶಮಿ ಅಂಗವಾಗಿ ಬಳ್ಳಾರಿಗೆ ಭೇಟಿ ಕೊಡಲು ಅನುಮತಿ ನೀಡಬೇಕು ಎಂದು ರೆಡ್ಡಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಜನಾರ್ದನ ರೆಡ್ಡಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಈಗ ವಿಜಯದಶಮಿ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ತವರು ಜಿಲ್ಲೆಗೆ ಭೇಟಿ ನೀಡಲು ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಬಳ್ಳಾರಿಗೆ ಹೋಗದಂತೆ ಷರತ್ತು ವಿಧಿಸಿ, ಜಾಮೀನು ನೀಡಲಾಗಿತ್ತು. ಆದ್ದರಿಂದ, ಜೈಲಿನಿಂದ ಬಿಡುಗಡೆಗೊಂಡ ರೆಡ್ಡಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜನಾರ್ದನ ರೆಡ್ಡಿಗೆ ಪುತ್ರಿ ಬ್ರಹ್ಮಿಣಿ ವಿವಾಹದ ಸಮಯದಲ್ಲಿ 21 ದಿನಗಳ ಕಾಲ ಬಳ್ಳಾರಿಯಲ್ಲಿರಲು ಕೋರ್ಟ್ ಒಪ್ಪಿಗೆ ನೀಡಿತ್ತು. 2017ರ ಜನವರಿಯಲ್ಲಿ ಜ.12 ರಿಂದ 16ರ ತನಕ ಬಳ್ಳಾರಿಗೆ ಭೇಟಿ ನೀಡಿ, ಸಂಕ್ರಾಂತಿ ಆಚರಣೆ ಮಾಡಲು ಕೋರ್ಟ್ ಒಪ್ಪಿಗೆ ನೀಡಿತ್ತು.












Click it and Unblock the Notifications