ಹೊಸಪೇಟೆ; ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸೆಲ್ಯೂಟ್
ವಿಜಯನಗರ, ಏಪ್ರಿಲ್ 2; ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಬಿಸಿಲು ಎಂದರೇ 44 ರಿಂದ45 ಡಿಗ್ರಿ ತನಕ ಉಷ್ಣಾಂಶವಿರುತ್ತದೆ. ಹೊಸಪೇಟೆ ನಗರದ ಮಹಿಳಾ ಥಿಯೋಸಫಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಸತತ 8 ವರ್ಷಗಳಿಂದ ಬೇಸಿಗೆಯ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುತ್ತಾ ಬಂದಿದ್ದಾರೆ.
ಬೇಸಿಗೆ ದಿನಗಳಲ್ಲಿ ಕೆರೆ-ಕುಂಟೆಗಳು ಬತ್ತಿ ಹೋಗುತ್ತವೆ ಹಾಗಾಗಿ ನೀರಿನ ಅಭಾವ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಈ ದಿನಗಳಲ್ಲಿ ಪಕ್ಷಿಗಳು ನೀರಿಗಾಗಿ ಅಲೆಯುತ್ತಿರುತ್ತವೆ. ಇದನ್ನು ಅರಿತ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಹಿಳಾ ಥಿಯೋಸಫಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಸಂಗೀತಾ ಗಾಂವಕರ ಮತ್ತು ಗ್ರಂಥಪಾಲಕಿ ಸುಜಾತ ಇಂತಹ ಸಮಾಜಮುಖಿ ಕಾರ್ಯಗಳು ಮತ್ತು ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದ್ದಾರೆ.
ಕಾಲೇಜಿನ ಬಿಎ, ಬಿಕಾಂ, ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಮರಗಳಿಗೆ ಸುಮಾರು 30 ಮಣ್ಣಿನ ಮಡಿಕೆಗಳನ್ನು ನೇತು ಹಾಕಿ, ನೀರು ಹಾಗೂ ಆಹಾರವನ್ನು ದೊರೆಯುವಂತೆ ಮಾಡಿದ್ದಾರೆ. ಪ್ರತಿ ವರ್ಷ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಈ ಕೆಲಸ ಮಾಡುತ್ತಾರೆ.

ಸ್ವಯಂ ಹಣ ಸಂಗ್ರಹಣೆ
ಈ ಕಾರ್ಯಕ್ಕಾಗಿ ಹಣ ಸಂಗ್ರಹಣೆ ಮಾಡಲು ಕಾಣಿಕೆ ಡಬ್ಬಿಯನ್ನು ಮಾಡಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹಣ ಹಾಕಬಹುದು. ಆ ಹಣದಿಂದ ಪಕ್ಷಿಗಳಿಗೆ ಆಹಾರವನ್ನು ಖರೀದಿ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗಳ ಹಣದಿಂದಲೇ ಖರೀದಿ ಮಾಡಲಾಗುತ್ತಿದೆ.

ಮನೆಯಲ್ಲಿಯೂ ಈ ಕಾರ್ಯ ನಡೆಯುತ್ತೆ
ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಮನೆಯಿಂದ ಧವಸ ಹಾಗೂ ಧಾನ್ಯಗಳನ್ನು ಕಾಲೇಜಿಗೆ ತರುತ್ತಿರುವುದು ವಿಶೇಷವಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಕ್ಷಿಗಳಿಗಾಗಿ ಈ ಕಾರ್ಯ ಮಾಡುತ್ತಿಲ್ಲ. ಮನೆಯಲ್ಲೂ ಸಹ ನೀರು ಮತ್ತು ಆಹಾರವನ್ನು ಇಡುತ್ತಿದ್ದಾರೆ. ಇದು ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳಿಗೆ ಅನಕೂಲವಾಗಲಿದೆ. ಮಾರ್ಚ್, ಏಪ್ರಿಲ್ ಮತ್ತು ಮೇ ಈ ಮೂರು ತಿಂಗಳುಗಳಲ್ಲಿ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಕಾಲೇಜಿನಲ್ಲಿ ಒದಗಿಸಲಾಗುತ್ತದೆ.

ಪರಿಸರ ಜಾಗೃತಿ ಮೂಡಿಸುವುದು
ಥಿಯೋಸಫಿಕಲ್ ಕಾಲೇಜಿನ ಗ್ರಂಥಪಾಲಕಿ ಸುಜಾತ ಈ ಕುರಿತು ಮಾತನಾಡಿದ್ದಾರೆ. "ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 8 ವರ್ಷಗಳಿಂದ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಮನುಷ್ಯರಂತೆ ಪಕ್ಷಿಗಳಿಗೂ ಸಹ ನೀರು ಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ" ಎಂದರು.

ಸ್ವಯಂ ಪ್ರೇರಿತರಾಗಿ ಹಣ
ವಿದ್ಯಾರ್ಥಿನಿ ಭಾಗ್ಯ ಈ ಕುರಿತು ಮಾತನಾಡಿದ್ದು, "ಪಕ್ಷಿಗಳು ಬೇಸಿಗೆ ಸಂದರ್ಭದಲ್ಲಿ ನೀರು ಮತ್ತು ಆಹಾರ ಸಿಗದೇ ನಿತ್ರಾಣವಾಗುತ್ತವೆ. ಇದನ್ನು ತಪ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಯಿತು. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಕ್ಕೆ 5 ರಿಂದ 10 ರೂ. ಸ್ವಯಂ ಪ್ರೇರಿತರಾಗಿ ನೀಡುತ್ತಿದ್ದಾರೆ" ಎಂದು ಹೇಳಿದರು.












Click it and Unblock the Notifications