ಬಳ್ಳಾರಿ : ಟಿಕೆಟ್ ಸಿಗುವ ಮೊದಲೇ ಪ್ರಚಾರ ಆರಂಭ!
ಬಳ್ಳಾರಿ, ಫೆಬ್ರವರಿ 20 : ವಿಧಾನಸಭೆ ಚುನಾವಣೆಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರು ಎಂಬು ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಆದರೆ, ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ರಾಯಚೂರು ಮಾಜಿ ಸಂಸದ, ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಸೋದರಮಾವ ಸಣ್ಣ ಫಕೀರಪ್ಪ ಅವರು ಅಭ್ಯರ್ಥಿಯಾಗಬಹುದು ಎಂಬ ಸುದ್ದಿ ಹಬ್ಬಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರ : ಶ್ರೀರಾಮುಲು, ನಾಗೇಂದ್ರ ಮುಖಾಮುಖಿ?
ಶಿವರಾತ್ರಿಯಿಂದ ಸಣ್ಣ ಫಕೀರಪ್ಪ ಅವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಸೇರಿರುವ ಬಿ. ನಾಗೇಂದ್ರ ಸ್ಪರ್ಧಿಸಿದಲ್ಲಿ ಬಿಜೆಪಿಯಿಂದ ಬಿ. ಶ್ರೀರಾಮುಲು ಸ್ಪರ್ಧಿಸಲಿದ್ದಾರೆ.
ಪಕ್ಷದ ಹೈಕಮಾಂಡ್ ಬಿ. ಶ್ರೀರಾಮುಲು ಅವರ ಸ್ಪರ್ಧೆಗೆ ಒಪ್ಪಿಗೆ ನೀಡದಿದ್ದರೆ ಅವರ ಸೋದರಮಾವ ಸಣ್ಣ ಫಕೀರಪ್ಪ ಅವರಿಗೆ ಟಿಕೆಟ್ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು
ಈ ಹಿನ್ನಲೆಯಲ್ಲಿ ಶಿವರಾತ್ರಿಯಂದು ಚೆಳ್ಳಗುರ್ಕಿಯ ಶ್ರೀ ಎರ್ರಿತಾತ ಜೀವಸಮಾಧಿ ಸುಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಣ್ಣ ಫಕೀರಪ್ಪ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆ, ಸಂಸದ ಬಿ. ಶ್ರೀರಾಮುಲು ಅವರ ಅಭಿವೃದ್ಧಿ ಕಾರ್ಯಗಳನ್ನು ಬಂಡವಾಳ ಮಾಡಿಕೊಂಡು ಸಣ್ಣ ಫಕೀರಪ್ಪ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಟಿಕೆಟ್ ಸಿಗುವುದೇ? ಕಾದು ನೋಡಬೇಕು.
ಬಳ್ಳಾರಿ ಮಹಾನಗರ ಪಾಲಿಕೆಯ ಕೆಲ ವಾರ್ಡ್ಗಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಸೋಮವಾರ 28ನೇ ವಾರ್ಡ್ನ ಗಲ್ಲಿ-ಗಲ್ಲಿಗಳಿಗೆ ಭೇಟಿ ನೀಡಿ ಅವರು ಮತ ಯಾಚಿಸುತ್ತಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಸಣ್ಣ ಫಕೀರಪ್ಪ ಅವರು, 'ಚುನಾವಣೆಯ ಪೂರ್ವದಲ್ಲಿ ಒಂದು ಅಥವಾ ಎರಡು ಸುತ್ತು ಮತಭಿಕ್ಷೆ ಕೇಳುವೆ. ಜನರ ಸಮಸ್ಯೆಗಳನ್ನು ತಿಳಿದುಕೊಳ್ಳುವೆ. ಸಾಧ್ಯವಾದಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಹರಿಸಲು ಯತ್ನಿಸುವೆ' ಎಂದು ಹೇಳಿದರು.