ನಾಳೆ ಮೋದಿ ಬಳ್ಳಾರಿಗೆ : ಜಿಲ್ಲಾ ಕ್ರೀಡಾಂಗಣದಲ್ಲಿ ಜರ್ಮನ್ ಟೆಂಟ್ ಅಳವಡಿಕೆ
ಬಳ್ಳಾರಿ, ಮೇ 2 : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬಳ್ಳಾರಿಗೆ ಮೇ.3 ರಂದು(ನಾಳೆ) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಬಿಸಿಲು ಮೋದಿ ಅವರ ಚುನಾವಣಾ ಪ್ರಚಾರದ ಭಾಷಣಕ್ಕೆ ಅಡ್ಡಿ ಆಗದಿರಲಿ ಎಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದೆ.
ಬಳ್ಳಾರಿ ಬಿಸಿಲಿನ ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಕಾರ್ಯಕ್ರಮಕ್ಕೆ ಜನರು ಸೇರುವುದು ಕಷ್ಟ ಎಂದು ತಿಳಿದ ಆಯೋಜಕರು ಜರ್ಮನ್ ಟೆಂಟ್ ಆಳವಡಿಸಿದ್ದಾರೆ. ಈ ಟೆಂಟ್ ವಿಶೇಷವಾಗಿದ್ದು, ಬಿಸಿಲಿನ ತಾಪಮಾನ ತಡೆಯುವುದಷ್ಟೇ ಅಲ್ಲ, ಫೈರ್ ಹಾಗೂ ವಾಟರ ಪ್ರೂಫ್ ಕೂಡ ಎಂಬುದು ಗಮನಾರ್ಹ.
ದೇಶಕ್ಕೆ ಉಡುಪಿ ನೀಡಿದ ಕೊಡುಗೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ
ಜರ್ಮನ್ ನಿಂದ ಬಂದ ಪರಿಕರಗಳು
ಮೊದಲ ಬಾರಿಗೆ ಜರ್ಮನ್ ಟೆಂಟ್ ಬಳಸಿದ್ದು, ಇದಕ್ಕೆ ಬೇಕಾದ ಅಲ್ಯೂಮಿನಿಯಂ ಹೊದಿಕೆ, ಬಟ್ಟೆ ಇತರ ಪರಿಕರಗಳನ್ನು ಜರ್ಮನ್ ನಿಂದಲೇ ತರಿಸಲಾಗಿದೆ . ಈ ಟೆಂಟ್ ಅನ್ನು ಬೆಂಗಳೂರಿನ ಗುತ್ತಿಗೆ ಸಂಸ್ಥೆಯೊಂದು ಆಳವಡಿಸಿದ್ದು, ಇದರ ಅಡಿಯಲ್ಲಿ 60 ರಿಂದ 70 ಸಾವಿರ ಜನ ಕುಳಿತುಕೊಳ್ಳಬಹುದಾಗಿದೆ. ವೇದಿಕೆಯ ಹಿಂಭಾಗದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ಕೂಡ ನಿರ್ಮಿಸಲಾಗಿದೆ.
ಬಿಸಿಲು ತಟ್ಟುವುದಿಲ್ಲ
ಚುನಾವಣೆ ಬಿಸಿಯಲ್ಲಿ ಬಳ್ಳಾರಿಯ ಬಿರು ಬಿಸಿಲು ತಾಕದಿರಲೆಂದು ಪ್ರಧಾನಿ ನರೇಂದ್ರಮೋದಿ ಮತ್ತು ಸಭಿಕರಿಗಾಗಿ ಕರ್ನಾಟಕ ಬಿಜೆಪಿ ಜರ್ಮನ್ ಟೆಂಟ್ ಮೂಲಕ ವೇದಿಕೆಯನ್ನು ಕವರ್ ಮಾಡುತ್ತಿದೆ. ಈ ಟೆಂಟ್ ಅಡಿ ನಿಂತು ಭಾಷಣ ಮಾಡಿದರೆ ತಾಪ ಯಾವುದೇ ಕಾರಣಕ್ಕೂ ತಟ್ಟುವುದಿಲ್ಲ.
ನಾಳೆ ಗುರುವಾರ ಸುಡುಬಿಸಿಲಲ್ಲಿ ಮಧ್ಯಾಹ್ನ 2.30 ರಿಂದ 3 ಗಂಟೆ ಸುಮಾರಿಗೆ ಸಾರ್ವಜನಿಕರ ಎದುರಲ್ಲಿ ನಿಂತು ಭಾಷಣ ಮಾಡುವ ಪ್ರಧಾನಿ, ಚುನಾವಣಾ ಪ್ರಚಾರದಲ್ಲಿ ಬಳಲಿರುವ ಸಾಧ್ಯತೆಗಳಿದ್ದು, ಭಾಷಣ ಮಾಡುವಾಗ ಸುಸ್ತಾಗಬಾರದು.
ಬಿಸಿಲತಾಪಕ್ಕೆ ಜನರು ಭಯ ಬಿದ್ದು, ಸಭೆಯಿಂದ ದೂರ ಉಳಿಯಬಾರದೆಂದು ಪಕ್ಷ ಇಂಥಹ ಆಧುನಿಕ ವ್ಯವಸ್ಥೆಯ ಟೆಂಟ್ ಅಳವಡಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭರದಿಂದ ಸಾಗಿದೆ ಕೆಲಸ
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಈ ಸಭೆಗೆ ಜರ್ಮನ್ ಟೆಂಟ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. 40 ಡಿಗ್ರಿ ಸೆಲ್ಸಿಯಸ್ ತಾಪದಲ್ಲೂ ಕಾರ್ಮಿಕರು ಟೆಂಟ್ ಅಳವಡಿಸುತ್ತಿದ್ದು, ವಿಶೇಷ ಭದ್ರತಾ ದಳದ ಅಧಿಕಾರಿಗಳು, ಬಿಜೆಪಿ ಮುಖಂಡರು ಕೆಲಸವನ್ನು ವೈಯಕ್ತಿಕ ಆಸಕ್ತಿಯಿಂದ ಗಮನಿಸುತ್ತಿದ್ದಾರೆ.
ಏನು ತಟ್ಟಲ್ಲ ಕಣ್ರಿ...
ಮಾಜಿ ಶಾಸಕ ಮೃತ್ಯುಂಜಯ ಜಿನಗಾ ಮಾತನಾಡಿ, ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಆಹ್ವಾನಿಸಲಾಗಿದೆ. ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯ ಜರ್ಮನ್ ಟೆಂಟ್ ಹಾಕಿಸಲಾಗುತ್ತಿದೆ. ಈ ಟೆಂಟ್ ಅಡಿ ಕೂತವರಿಗೆ ಬಿಸಿಲ ತಾಪವಾಗಲೀ, ಭೋರ್ಗರೆಯುವ ಮಳೆಯ ಪರಿಣಾಮವಾಗಲೀ, ಮೈ ಕೊರೆಯವ ಚಳಿಯ ಪ್ರಭಾವ ಆಗುವುದಿಲ್ಲ ಎಂದರು.
ಜನ ಸಭೆ ಬಿಟ್ಟು ಏಳೋದಿಲ್ಲ
ಜಿ. ಸೋಮಶೇಖರರೆಡ್ಡಿ ಮಾತನಾಡಿ, ಏರುತ್ತಿರುವ ಬಿಸಿಲ ತಾಪದಲ್ಲಿ ಜನರನ್ನು ಸೇರಿಸುವ ಕುರಿತು ನಮ್ಮಲ್ಲಿ ಭಯವಿತ್ತು. ಜರ್ಮನ್ ಟೆಂಟ್ ಅಳವಡಿಸುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಭೆಯಲ್ಲಿಯೇ ಹಿಡಿದಿಟ್ಟುಕೊಳ್ಳಲು ಅವಕಾಶವಿದೆ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರ್ಮನ್ ಟೆಂಟ್ ಹಾಕುವ ಕಾಮಗಾರಿಯನ್ನು ಜಿಲ್ಲಾ ಬಿಜೆಪಿ ಪ್ರಮುಖರು, ಮುಖಂಡರು ಮತ್ತು ಕಾರ್ಯಕರ್ತರು ಪರಿಶೀಲನೆ ನಡೆಸಿ, ಪ್ರವೇಶದ್ವಾರ, ಹೊರದ್ವಾರ, ಕುಡಿಯುವ ನೀರು ಪೂರೈಕೆ, ಸಭಿಕರ ತಿರುಗಾಟದ ರಸ್ತೆ ಕುರಿತು ಚರ್ಚೆ ನಡೆಸಿ, ಜಿಲ್ಲಾ ಪೊಲೀಸರ ಜೊತೆ ಮಾತುಕತೆ ನಡೆಸಿದರು.