ಬಳ್ಳಾರಿ; ಸೇತುವೆಯ ಫಿಲ್ಲರ್ ದುರಸ್ತಿ, ಜನಪ್ರತಿನಿಧಿಗಳ ಮೊಕ್ಕಾಂ
ಬಳ್ಳಾರಿ, ನವೆಂಬರ್2 : ಎಲ್ಎಲ್ಸಿ ಕಾಲುವೆ ಆಂಧ್ರ- ಕರ್ನಾಟಕದ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ಆದರೆ ಕಾಲುವೆಯ ಪಿಲ್ಲರ್ ವೊಂದು ಕೊಚ್ಚಿಕೊಂಡು ಹೋಗಿರುವುದು ಎರಡು ರಾಜ್ಯಗಳ ರೈತರಿಗೆ ಸಂಕಷ್ಟಕ್ಕೆ ತಂದಿದೆ. ಹೀಗಾಗಿ ಸಮಾರೋಪಾದಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿ ಸ್ಥಳದಲ್ಲಿ ಜನಪ್ರತಿನಿಧಿಗಳು ಮೊಕ್ಕಾಂ ಹೂಡಿದಿದ್ದಾರೆ.
ಬಳ್ಳಾರಿ ತಾಲೂಕಿನ ಬಿಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಎಲ್ಎಲ್ಸಿ ಸೇತುವೆಯ ಪಿಲ್ಲರ್ವೊಂದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಎಲ್ಎಲ್ಸಿ ಕಾಲುವೆಗೆ ನೀರು ಹೋಗುವುದನ್ನು ಬಂದ್ ಮಾಡಲಾಗಿದೆ. ನೀರು ಬಂದ್ ಮಾಡಿ 25 ದಿನ ಕಳೆಯುತ್ತಾ ಬರುತ್ತಿದೆ. ಹೀಗಾಗಿ ಬಳ್ಳಾರಿ ತಾಲೂಕಿನ 20 ಗ್ರಾಮಗಳು ಹಾಗೂ ಆಂಧ್ರದ ಹತ್ತಾರು ಗ್ರಾಮಗಳು ಸೇರಿ ಸುಮಾರು 3 ಲಕ್ಷ ಎಕರೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ.
ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುವೆಗೆ ನೀರು ಬಿಡಬೇಕಾದರೆ ಪಿಲ್ಲರ್ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಪಿಲ್ಲರ್ ದುರಸ್ತಿ ಕಾಮಗಾರಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರೇ ನಿನ್ನೆಯಿಂದ ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದಾರೆ.

ಇವತ್ತು ಪಿಲ್ಲರ್ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಬಳಿಕ ಕಾಲುವೆಗೆ ನೀರು ಬಿಡಲಾಗುವುದು ಎಂದು ಬಿ. ಶ್ರೀರಾಮುಲು ತಿಳಿಸಿದ್ದಾರೆ ಜೊತೆಗೆ ಸೇತುವೆ ಮೇಲೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆ ಸಿದ್ಧ ಮಾಡಲಾಗುತ್ತಿದೆ. ಸಿಎಂ ಜೊತೆ ಚರ್ಚೆ ಮಾಡಿದ್ದು,ಆಂಧ್ರ ಸರ್ಕಾರದ ಜೊತೆ ಕೂಡ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನೂ ಸಚಿವ ರಾಮುಲು ಮಾತ್ರ ಕಾಮಗಾರಿ ಮೊಕ್ಕಾಂ ಹೂಡಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಆಂಧ್ರ ಸಚಿವರಾದ ಗುಮ್ಮನೂರು ಜಯರಾಂ ಸೇರಿದಂತೆ ಹಲವು ನಾಯಕರು ಮೊಕ್ಕಾಂ ಹೂಡಿದ್ದಾರೆ. ಕಾಲುವೆಗೆ ನೀರು ಬಿಡಿಸುವಂತೆ ಜನಪ್ರತಿನಿಧಿಗಳಿಗೆ ರೈತರು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಈ ಕಾರಣಕ್ಕಾಗಿ ಸಚಿವರು, ಶಾಸಕರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಂದ್ರ ರಾಜಕೀಯಕ್ಕಾಗಿ ಸ್ಥಳದಲ್ಲಿ ಮೊಕ್ಕಂ ಹೂಡಿಲ್ಲ. ಈ ಕ್ಷೇತ್ರದ ಶಾಸಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ. ಇನ್ನು ಎಲ್ಎಲ್ಸಿ ಕಾಲುವೆ ದುರಸ್ತಿ ಕಾಮಗಾರಿ ಈಗ ರಾಜಕೀಯ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಮಾತ್ರ ಬಾಕಿ. ಹೀಗಾಗಿ ಎಲ್ಎಲ್ಸಿ ಕಾಲುವೆ ದುರಸ್ಥಿ ನೆಪದಲ್ಲಿ ಸಚಿವರು,ಶಾಸಕರು ಸ್ಥಳದಲ್ಲೇ ಮೊಕ್ಕಂ ಹೂಡಿರುವುದು ಇದಕ್ಕೆ ನಿದರ್ಶನ ಎನ್ನುವುದು ಹಲವರ ಅಭಿಪ್ರಾಯ.












Click it and Unblock the Notifications