ಬಳ್ಳಾರಿ; ಕೆಲವು ಗ್ರಾಮಗಳಲ್ಲಿ ಮೊಹರಂ ಹಬ್ಬದ ಆಚರಣೆ ನಿಷೇಧ
ಬಳ್ಳಾರಿ, ಜುಲೈ 24; ಬಳ್ಳಾರಿ ಜಿಲ್ಲೆಯಾದ್ಯಂತ ಜುಲೈ 20 ರಿಂದ 29ರ ತನಕ ನಡೆಯುವ ಮೊಹರಂ ಹಬ್ಬದ ಆಚರಣೆಯನ್ನು ವಿವಿಧ ತಾಲೂಕಿನ ಕೆಲವು ಗ್ರಾಮಗಳಲ್ಲಿ ನಿಷೇಧಿಸಲಾಗಿದೆ. ಜಿಲ್ಲಾಡಳಿತ ಈ ಕುರಿತು ಆದೇಶವನ್ನು ಹೊಡಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮೊಹರಂ ಹಬ್ಬದ ಆಚರಣೆಯನ್ನು ನಿಷೇಧಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಮೊಹರಂ ಹಬ್ಬವನ್ನು ಜಿಲ್ಲೆಯ ವಿವಿಧ ತಾಲೂಕುಗಳ ಕೆಲ ಗ್ರಾಮಗಳಲ್ಲಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಕೆಲ ಗ್ರಾಮಗಳಲ್ಲಿ ವೈಷಮ್ಯ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹಬ್ಬದ ಆಚರಣೆ ವೇಳೆ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 (ಎ) (ಬಿ) (ಡಿ) (ಇ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಗ್ರಾಮಗಳ ಪಟ್ಟಿ; ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿನ ಮಹಾನಂದಿಕೊಟ್ಟಂ ಒಳಗಡೆ ಹಾಗೂ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆ.
ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ, ಬಂಡ್ರಾಳ್, ದೇಶನೂರು, ಕೆ.ಬೆಳಗಲ್ ಗ್ರಾಮಗಳು.
ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡೇಗೋಳ, ಅರಳಿಗನೂರು ಗ್ರಾಮಗಳು. ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು ಗ್ರಾಮಗಳು.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು, ಮಿಂಚೇರಿ, ಸಂಜೀವರಾಯನಕೋಟೆ ಗ್ರಾಮಗಳು. ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಂ.15-ಗೋನಾಳು ಗ್ರಾಮದಲ್ಲಿ ಆಚರಣೆ ನೀಷೇಧಿಸಲಾಗಿದೆ.
ನಿಷೇಧಿಸಲಾದ ಚಟುವಟಿಕೆಗಳು: ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಎ)ರ ಅಡಿಯಲ್ಲಿ ಶಸ್ತ್ರ, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತುವನ್ನು ಒಯ್ಯುವುದು.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಬಿ)ರ ಅಡಿಯಲ್ಲಿ ಯಾವುದೇ ದಾಹಕ(ನಾಶಕಾರಿ) ಪದಾರ್ಥ ಇಲ್ಲವೇ ಸ್ಪೋಟಕ ವಸ್ತು ಒಯ್ಯುವುದು. ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಡಿ)ರ ಅಡಿಯಲ್ಲಿ ಯಾವುದೇ ವ್ಯಕ್ತಿಗಳ ಭಾವ ಚಿತ್ರಗಳನ್ನು ಅವಮಾನಕಾರ ರೀತಿಯಲ್ಲಿ ಪ್ರದರ್ಶಿಸಬಾರದು.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಇ)ರ ಅಡಿಯಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದನ್ನು, ಪದ ಹಾಡುವುದನ್ನು, ವಾದ್ಯ ಬಾರಿಸುವುದನ್ನು, ವ್ಯಾಖ್ಯಾನ ಕೊಡುವುದನ್ನು, ಸನ್ನೆ ಪ್ರದರ್ಶನವನ್ನು ಹಾಗೂ ಗುಂಪುಗೂಡಿ ಮೆರವಣಿಗೆ ಮಾಡುವುದು.
ಈ ಪ್ರತಿಬಂಧಕ ಆಜ್ಞೆಗೆ ವಿರುದ್ಧವಾಗಿ ಯಾರೊಬ್ಬರು ವರ್ತಿಸಿದರೆ, ಯಾವುದೇ ಪೊಲೀಸ್ ಅಧಿಕಾರಿಗಳಿಂದ ಇಂತಹ ವಸ್ತು ವಶಪಡಿಸಿಕೊಳ್ಳಲಾಗುತ್ತದೆ. ಈ ರೀತಿ ಪಡೆಯಲ್ಪಟ್ಟ ಪದಾರ್ಥ ಸರ್ಕಾರಕ್ಕೆ ಜಮಾ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications