ಗಣಿ ಧೂಳು ಕೊಡವಿಕೊಂಡ ಬಳ್ಳಾರಿಯ ದೊರೆ ಯಾರಾಗುತ್ತಾರೆ?
ಬಳ್ಳಾರಿ, ಜನವರಿ 16: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬಳ್ಳಾರಿ ಗಣಿ ಹಗರಣದ ಕಹಿ ನೆನಪು ಇನ್ನೂ ಬಳ್ಳಾರಿ ಮತದಾರರ ಮನದಿಂದ ಮಾಸಿಲ್ಲ, 2008ರಲ್ಲಿ ನಡೆದ ಹಗರಣ 2013ರಲ್ಲಿ ನಡೆದ ಚುನಾವಣೆ ಮೇಲೆ ಪರಿಣಾಮ ಬೀರಿದ್ದು, ಸ್ಪಷ್ಟವಾಗಿ ಗೋಚರಿಸಿತ್ತು.
ಒಂಬತ್ತು ಕ್ಷೇತ್ರಗಳನ್ನು ಹೊಂದಿರುವ ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಸ್ಪರ್ಧೆ ಇದ್ದು, ಎರಡೂ ಪಕ್ಷಗಳಿಗೆ ಬಳ್ಳಾರಿ ಪ್ರತಿಷ್ಠೆಯ ಕಣವಾಗಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 5 ಸೀಟು ಪಡೆದಿದ್ದರೆ ಉಳಿದ ಸೀಟುಗಳನ್ನು ಬಿಜೆಪಿ. ಜೆಡಿಎಸ್, ಬಿಎಸ್ಆರ್ ಕಾಂಗ್ರೆಸ್, ಸ್ವತಂತ್ರ್ಯ ಅಭ್ಯರ್ಥಿಗಳು ತಲಾ ಒಂದರಂತೆ ಹಂಚಿಕೊಂಡಿದ್ದವು.
ಆದರೆ 2013ರಲ್ಲಿ ಬಿಜೆಪಿಯು, ಕೆಜೆಪಿ, ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಆಗಿ ಒಡೆದಿತ್ತು ಆದರೆ ಈಗ ಅದು ಒಂದಾಗಿರುವುದರಿಂದ ಕಾಂಗ್ರೆಸ್ಗೆ ಪ್ರಭಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಬಂಡಾಯದ ಸಮಸ್ಯೆ
ಬಳ್ಳಾರಿಯಲ್ಲಿ ಬಿಜೆಪಿಗೆ ಇರುವುದು ಒಗ್ಗಟ್ಟಿನ ಸಮಸ್ಯೆ, ಈಗಾಗಲೇ ಬಿಜೆಪಿಯ ಆನಂದ್ ಸಿಂಗ್ ಮತ್ತು ನಾಗೇಂದ್ರ ರಾವ್ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎಂಬ ಮಾತಿದೆ. ಈ ಇಬ್ಬರೂ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿ ಓಟುಗಳನ್ನು ಒಡೆಯುವ ಸಾಧ್ಯತೆ ಇದೆ, ಇದು ಬಿಜೆಪಿಗೆ ದೊಡ್ಡ ಪೆಟ್ಟಾಗುವ ಸಂಭವ ಇದೆ.

ಲಾಡ್ಗಳ ನಡುವಿನ ವೈಮನಸ್ಯ
ನಾಗೇಂದ್ರ ರಾವ್ ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಇದೆ. ಬಳ್ಳಾರಿ ಕಾಂಗ್ರೆಸ್ನ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಗಣಿ ದೊರೆಗಳಾದ ಲಾಡ್ ಕುಟುಂಬದ್ದು, ಸಂತೋಶ್ ಲಾಡ್ ಮತ್ತು ಸೋದರ ಸಂಬಂಧಿ ಅನಿಲ್ ಲಾಡ್ ಪರಸ್ಪರ ಸಂಬಂಧ ಅಷ್ಟೇನು ಉತ್ತಮವಾಗಿಲ್ಲ. ಸಂತೋಶ್ ಲಾಡ್ ಸಿದ್ದರಾಮಯ್ಯ ಅವರ ಜೊತೆಗೆ ಆಪ್ತವಾಗಿದ್ದು, ಅದರ ಪ್ರಭಾವ ಬಳಸಿ ಅನಿಲ್ ಲಾಡ್ ಅವರನ್ನು ಮಟ್ಟ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ, ಹಾಗಾದಲ್ಲಿ ಅನಿಲ್ ಲಾಡ್ ಬೇರೆ ಪಕ್ಷದ ಪಾಲಾಗುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ.

ಸಂತೋಶ್ ಲಾಡ್-ಕೆಸಿ ಕೊಂಡಯ್ಯ ವಿರಸ
ಗಣಿ ಹಗರಣಕ್ಕೆ ಮುಂಚೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಅನ್ನು ಬಳ್ಳಾರಿಯಲ್ಲಿ ಗಟ್ಟಿ ಮಾಡಿದ ಶ್ರೇಯ ಕೆಸಿ ಕೊಂಡಯ್ಯ ಅವರಿಗೆ ಸಲ್ಲಬೇಕು, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಕೆಸಿ ಕೊಂಡಯ್ಯ ಅವರನ್ನು ಮೂಲೆಗುಂಪು ಮಾಡಲಾಗಿದೆ. ಹಿರಿಯ ಕೊಂಡಯ್ಯ ಇದ್ದರೂ ಸಂತೋಶ್ ಲಾಡ್ ಅವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಾಗಲಂತೂ ಕೆಸಿ ಕೊಂಡಯ್ಯ ಅವರು ಬಹಿರಂಗವಾಗಿಯೇ ಅಸಮಧಾನ ಸೂಚಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕೊಂಡಯ್ಯ ಅವರನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳದಿದ್ದರೆ ಅದು ಮತಗಳ ವಿಭಜನೆಗೆ ಕಾರಣವಾಗಬಹುದು.

ಆಂತರಿಕ ಸಮಸ್ಯೆ ಪರಿಹರಿಸಿಕೊಂಡವರಿಗೆ ಮಾತ್ರ ಜಯ
ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಇವೆ, ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಪಕ್ಷ ಬಳ್ಳಾರಿಯಲ್ಲಿ ಗೆಲುವಿನ ನಗೆ ಬೀರಲಿದೆ.

ರೆಡ್ಡಿಯಿಂದ ತೆರೆಮರೆ ಪ್ರಯತ್ನ
ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಇಲ್ಲದೆ ಬಳ್ಳಾರಿ ರಾಜಕಾರಣ ಪೂರ್ಣವಾಗದು. ಕಳೆದ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಸ್ಥಾಪಿಸಿ ಬಿಜೆಪಿ ಓಟಿನ ಮೂಟೆಗೆ ತೂತು ಮಾಡಿದ್ದ ಶ್ರೀರಾಮುಲು ಈಗ ಬಿಜೆಪಿ ತೆಕ್ಕೆಯಲ್ಲೇ ಇದ್ದು, ಪರಿವರ್ತನಾ ರ್ಯಾಲಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು ಗಣಿ ಹಗರಣದಿಂದ ತಾತ್ಕಾಲಿಕ ನೆಮ್ಮದಿ ಪಡೆದಿರುವ ಜನಾರ್ಧನ ರೆಡ್ಡಿ ತೆರೆಮರೆಯಲ್ಲೆ ಬಿಜೆಪಿ ಗೆಲ್ಲಿಸಲು ಶ್ರಮವಹಿಸುತ್ತಾರೆ ಎನ್ನಲಾಗಿದೆ. ಕರುಣಾಕರ ರೆಡ್ಡಿ ಅವರು ಸಕ್ರಿಯ ರಾಜಕೀಯ ಹಿಂದೆ ಸರಿದಂತೆ ಕಾಣುತ್ತಿದ್ದು, ಚುನಾವಣೆ ಸಮಯದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರೊ ನೋಡಬೇಕು.












Click it and Unblock the Notifications