ಹಲವು ಶಾಸಕರಿಂದ ರಾಜೀನಾಮೆ: ಶ್ರೀರಾಮುಲು ಬಾಂಬ್
Recommended Video

ಬಳ್ಳಾರಿ, ಮಾರ್ಚ್ ೦4: ಬಳ್ಳಾರಿಯ ಕೆಲವು ಶಾಸಕರಲ್ಲದೆ ಇನ್ನೂ ಕೆಲವು ಶಾಸಕರು ರಾಜೀನಾಮೆ ಸಲ್ಲಿಸುವ ಬಗ್ಗೆ ಮಾಹಿತಿ ಇದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಹೇಳಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಬಗ್ಗೆ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಅವರು ರಾಜೀನಾಮೆ ನೀಡುವ ನಿರ್ಣಯಕ್ಕೆ ಬಂದಿದ್ದಾರೆ. ಸರ್ಕಾರಕ್ಕೆ ಅಪಾಯ ಇದೆ ಎಂದು ಅವರು ಹೇಳಿದರು.
ಇಂದಷ್ಟೆ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿದ್ದು, ಇನ್ನೂ ಮೂವರು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸುದ್ದಿ ಇದೆ. ಆದರೆ ರಾಮುಲು ಅವರು ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಬಹುದು ಎಂದು ಹೇಳಿದ್ದಾರೆ. ಇದು ಮೈತ್ರಿ ಸರ್ಕಾರಕ್ಕೆ ತಲೆನೋವು ತರುವ ಸಾಧ್ಯತೆ ಇದೆ.

ಆನಂದ್ ಸಿಂಗ್-ಜೆ.ಎನ್.ಗಣೇಶ್ ಅವರ ಜಗಳದ ಬಗ್ಗೆ ಮಾತನಾಡಿದ ರಾಮುಲು ಅವರು, ಅದು ಅವರಿಬ್ಬರ ವೈಯಕ್ತಿಕ ವಿಚಾರ ಜಿಲ್ಲೆಯ ಜನರು ತಲೆ ಕೆಡಿಸಿಕೊಳ್ಳಬಾರದು ಎಂದರು.
ಸರ್ಜಿಕಲ್ ಸ್ಟ್ರೈಕ್ 2 ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ರಾಮುಲು, ಮೋದಿ ಅವರು ಉಗ್ರರ ವಿರುದ್ಧ ಯುದ್ಧ ಸಾರಿದ್ದಾರೆ, ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡುವ ಬದಲು ಕಾಂಗ್ರೆಸ್ ಸಾಕ್ಷ್ಯ ಕೇಳುತ್ತಿದೆ ಎಂದರು.
ಇಂದಿರಾ ಗಾಂಧಿ ಅವರು ಪಾಕಿಸ್ತಾನದ ಮೇಲೆ ಯುದ್ಧ ಸಾರಿದಾಗ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ ಅವರು ಇಂದಿರಾ ಅವರನ್ನು 'ದುರ್ಗೆ' ಎಂದು ಕರೆದಿದ್ದರು ಎಂದು ಸ್ಮರಿಸಿದರು.












Click it and Unblock the Notifications