ಎಲ್ಲಾ ಜಿಲ್ಲೆಗಳಲ್ಲಿ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟೀನ್
ಬಳ್ಳಾರಿ, ಸೆಪ್ಟೆಂಬರ್ 11 : ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ 'ಇಂದಿರಾ ಸವಿರುಚಿ ಕೈ ತುತ್ತು ಮೊಬೈಲ್ ಕ್ಯಾಂಟೀನ್' ಆರಂಭವಾಗಲಿದೆ. 2018 ಮಾರ್ಚ್ ವೇಳೆಗೆ ತಾಲೂಕು ಕೇಂದ್ರಗಳಲ್ಲೂ ಕ್ಯಾಂಟೀನ್ ಆರಂಭಿಸುವ ಗುರಿ ಹೊಂದಲಾಗಿದೆ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಆಹಾರ ಒದಗಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಇಂದಿರಾ ಸವಿರುಚಿ ಕೈ ತುತ್ತು' ಮೊಬೈಲ್ ಕ್ಯಾಂಟೀನ್ ನವೆಂಬರ್ 1ರಿಂದ ಆರಂಭಿಸಲಾಗುತ್ತದೆ' ಎಂದು ಹೇಳಿದ್ದಾರೆ.

'ಜಿಲ್ಲಾ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ವತಿಯಿಂದ ಈ ಮೊಬೈಲ್ ಕ್ಯಾಂಟೀನ್ಗಳನ್ನು ಆರಂಭಿಸಲಾಗುತ್ತದೆ. ಪ್ರತಿ ಒಕ್ಕೂಟಕ್ಕೆ ಇದಕ್ಕಾಗಿ 10 ಲಕ್ಷ ರೂ. ಸಹಾಯಧನ, ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ' ಎಂದರು.
'ಈ ಮೊಬೈಲ್ ಕ್ಯಾಂಟೀನ್ ಆರಂಭದಿಂದ ಮಹಿಳೆಯರಿಗೆ ಉದ್ಯೋಗ ಮತ್ತು ಮಾರುಕಟ್ಟೆ ಕ್ಷೇತ್ರದ ಜ್ಞಾನ ವೃದ್ಧಿಯಾಗುತ್ತದೆ. ಈ ಕ್ಯಾಂಟೀನ್ ನಿರ್ವಹಣೆ, ವಾಹನ ಚಾಲನೆ ಎಲ್ಲವನ್ನು ಮಹಿಳೆಯರೇ ನೋಡಿಕೊಳ್ಳಲಿದ್ದಾರೆ' ಎಂದು ತಿಳಿಸಿದರು.
'ಇಂದಿರಾ ಸವಿರುಚಿ ಕೈ ತುತ್ತು ಮೊಬೈಲ್ ಕ್ಯಾಂಟೀನ್ ಯೋಜನೆ ಯಶಸ್ವಿಯಾದರೆ' 2018ರ ಮಾರ್ಚ್ ವೇಳೆಗೆ ತಾಲೂಕು ಕೇಂದ್ರಗಳಿಗೂ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ' ಎಂದು ಭಾರತಿ ಶಂಕರ್ ಹೇಳಿದ್ದಾರೆ.












Click it and Unblock the Notifications