'ನಮ್ಮೂರಿಗೆ ಬರಲೇಬೇಡಿ, ನೀವು ಊಸರವಳ್ಳಿಗಳು'
ಬಳ್ಳಾರಿ, ಮೇ 02 : ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಭೀಮಾನಾಯ್ಕ ಮತ್ತು ಅವರ ಬೆಂಬಲಿಗ ಬಿಜೆಪಿಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಅವರ ಪ್ರಚಾರಕ್ಕೆ ಜನರು ಅಡ್ಡಿ ಪಡಿಸಿದ್ದಾರೆ.
ಎರೆಡು ತಾಂಡಗಳವರು ಇಬ್ಬರು ನಾಯಕರು ತಾಂಡ ಪ್ರವೇಶ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಬಂದದಾರಿಗೆ ಸುಂಕವಿಲ್ಲ ಎಂದು ನಾಯಕರು ವಾಪಸ್ ತೆರಳಿದರು. 'ಊರಲ್ಲಿ ನಿಮಗೆ ಪ್ರವೇಶವೇ ಇಲ್ಲ. ಹೋಗಿ, ನೀವು ವಾಪಸ್ಸು ಹೋಗಿ ಅಂತ' ಜನರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಕಣಕ್ಕಿಳಿಯಲು ಕೃಷಿ ಇಲಾಖೆ ಕೆಲಸಕ್ಕೆ ರಾಜೀನಾಮೆ!
ಕೊಟ್ಟೂರು ಪಟ್ಟಣದಿಂದ ಕೇವಲ 4.50 ಕಿ.ಮೀ. ದೂರದಲ್ಲಿರುವ ಇರುವ ತಿಮ್ಮಲಾಪುರ ತಾಂಡಾಕ್ಕೆ ಬುಧವಾರ ಬೆಳಗ್ಗೆ ಚುನಾವಣಾ ಪ್ರಚಾರಕ್ಕೆ ಮಾಜಿ ಶಾಸಕ ಭೀಮಾನಾಯಕ್ ಅವರು ಹೋಗಿದ್ದರು. ತಾಂಡಾದ ಮುಂದೆಯೇ ಸಭೆ ಸೇರಿದ ಲಂಬಾಣಿ ಜನರು, ಅವರದ್ದೇ ಭಾಷೆಯಲ್ಲಿ, 'ನೀವು ಪಕ್ಷಾಂತರಿ, ಊಸರವಳ್ಳಿ, ಊರಲ್ಲಿ ನಿಮಗೆ ಪ್ರವೇಶವೇ ಇಲ್ಲ. ಹೋಗಿ, ವಾಪಸ್ಸು ಹೋಗಿ' ಎಂದು ಬೈದರು.
ಬಳ್ಳಾರಿ ಬಿರು ಬಿಸಿಲಿನ ಕ್ಷೇತ್ರ ಪರಿಚಯ
ಜೊತೆಯಲ್ಲೇ ಇದ್ದ ಮುಖಂಡ ಪಿ.ಎಚ್. ದೊಡ್ಡರಾಮಣ್ಣ ಸಮಾಧಾನ ಮಾಡಲು ಯತ್ನಿಸಿದಾಗ, ತಾಂಡಾದವರು, ಮತ್ತಷ್ಟು ಏರುಧ್ವನಿಯಲ್ಲಿ ಕಿರುಚಾಟ ಮಾಡುತ್ತಾ, ವಿರೋಧಿಸ ತೊಡಗಿದರು. ಗುಂಪಿನಲ್ಲಿ ಓರ್ವ ವೀಡಿಯೋ ರೆಕಾರ್ಡ್ ಮಾಡುವುದನ್ನು ಗಮನಿಸಿದ, ಅಭ್ಯರ್ಥಿ ಭೀಮಾನಾಯ್ಕ, 'ಏಯ್ ಏಕೆ ರೆಕಾರ್ಡ್ ಮಾಡ್ತೀಯಿ, ನಿಲ್ಲಿಸು' ಎಂದು ಅದನ್ನು ತಡೆದರು. ಆದರೆ, ಗ್ರಾಮಸ್ಥರು ಯಾವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿದರು? ಎನ್ನುವುದು ತಿಳಿದುಬಂದಿಲ್ಲ.
ಉಜ್ಜಯಿನಿ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ ಧೂಪದಹಳ್ಳಿಗೆ ಹೋಗಿ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾಗಲೂ ಜನರ ವಿರೋಧವನ್ನು ಎದುರಿಸಬೇಕಾಯಿತು.
ಕಾಲ್ನಡಿಗೆ ಮೂಲಕ ತಾಂಡಾ ಪ್ರವೇಶ ಮಾಡುತ್ತಿದ್ದ ಹರ್ಷವರ್ಧನ, ಜನರ ವಿರೋಧವನ್ನೂ ಲೆಕ್ಕಿಸದೇ ತಾಂಡಾ ಪ್ರವೇಶ ಮಾಡುವಾಗ, ಜನರು ಬಲವಂತವಾಗಿ ಹಿಂದಕ್ಕೆ ಹೋಗಲು ಹೇಳಿದರು. ಹರ್ಷವರ್ಧನ, ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಪರವಾಗಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಾನಾಯ್ಕ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.