ರೆಡ್ಡಿಯನ್ನು ಕೆಣಕಿದ ಲಾಡ್ ಗೆ ಬಳ್ಳಾರಿ ಬಿಜೆಪಿ ತಿರುಗೇಟು
ಬಳ್ಳಾರಿ, ನವೆಂಬರ್ 17: ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ ವಿಚಾರವನ್ನು ಟೀಕಿಸಿದ್ದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ವಿರುದ್ಧ ಬಿಜೆಪಿಯ ಬಳ್ಳಾರಿ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಪ್ಪು ಹಣದ ಬಗ್ಗೆ ಮಾತನಾಡುವ ಬಿಜೆಪಿಯವರು ಜನಾರ್ದನ ರೆಡ್ಡಿಯವರ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ ಎಂದು ಲಾಡ್ ಪ್ರಶ್ನಿಸಿದ್ದರು.
ಬ್ರಹ್ಮಿಣಿ ಸ್ಟೀಲ್ಸ್ ಘಟಕಕ್ಕೆ ಮಂಜೂರಾಗಿದ್ದ ಭೂಮಿ ಏನಾಯಿತು, ಕೆಐಎಡಿಬಿಯಿಂದ ಮಂಜೂರು ಮಾಡಿಸಿಕೊಂಡಿದ್ದ ಜಾಗದ ಕಥೆ ಏನು ಎಂಬುದು ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಲಾಡ್ ಕೇಳಿದ್ದರು.[ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]
ಇದೇ ವಿಚಾರವಾಗಿ ಲಾಡ್ ಗೆ ಉತ್ತರ ಎಂಬಂತೆ ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಗುರುಲಿಂಗನಗೌಡ, ಅನಿಲ್ ಲಾಡ್ ಅವರನ್ನೇ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕೋಟಿ-ಕೋಟಿ ಹಣ ಖರ್ಚು ಮಾಡಿ, ಜನ್ಮದಿನ ಅಚರಣೆಗೆ ಸಿನಿಮಾ ತಾರೆಯರನ್ನು ಕರೆಸುವವರು ಯಾರು? ಟೆನಿಸ್ ತಾರೆಯೊಬ್ಬರ ಜತೆಗೆ ಅರ್ಧ ಗಂಟೆ ಟೆನಿಸ್ ಆಡುವುದಕ್ಕೆ ಲಕ್ಷಾಂತರ ರುಪಾಯಿ ಕೊಟ್ಟವರು ಯಾರು ಎಂದು ನಾಡಿನ ಜನರಿಗೆ ಗೊತ್ತಿದೆ.

ಜನಾರ್ದನ ರೆಡ್ಡಿ ಅವರ ಮಗಳ ಹೇಳಿಕೆ ವಿಚಾರವಾಗಿ ಲಾಡ್ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸಾಂಪ್ರದಾಯಿಕವಾಗಿ ನಡೆದ ಮದುವೆಯಲ್ಲಿ ಕಲೆ, ವಿನ್ಯಾಸವನ್ನು ಕಂಡು ಜನರು ಸಂಭ್ರಮಿಸಿದ್ದಾರೆ. ಪಕ್ಷ ಭೇದ ಮರೆತು ಗಣ್ಯರು ಭಾಗವಹಿಸಿ ಆಶೀರ್ವಾದ ಮಾಡಿದ್ದಾರೆ ಎಂದು ಸಮರ್ಥನೆ ನೀಡಲಾಗಿದೆ.[ಗಾಲಿ ರೆಡ್ಡಿ ಮಗಳ ಮದ್ವೆಗೆ ಪರಂ ಎಂಟ್ರಿ, ಪೊಲೀಸರು ಗರಂ]
ಜನಾರ್ದನ ರೆಡ್ಡಿಯವರು ಹದಿನೇಳು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಕಂಕಣ ಭಾಗ್ಯ ದೊರೆತಿದೆ. ತಮ್ಮ ಜನ್ಮದಿನದಂದು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಜನಾರ್ದನ ರೆಡ್ಡಿಯವರ ಬಗ್ಗೆ ಅನಿಲ್ ಲಾಡ್ ಅವರಿಗೆ ಮಾತನಾಡುವ ನೈತಿಕವಾದ ಹಕ್ಕಿಲ್ಲ ಎನ್ನಲಾಗಿದೆ.












Click it and Unblock the Notifications