ಐತಿಹಾಸಿಕ ಹಂಪಿ ನೋಡಲು ಬಂದ ದೇಶಿ-ವಿದೇಶಿ ಪ್ರವಾಸಿಗರು
ಬಳ್ಳಾರಿ, ಜುಲೈ 6: ಬಳ್ಳಾರಿ ಜಿಲ್ಲೆಯ ವಿಶ್ವ ಪ್ರಸಿದ್ಧ ಹಂಪಿ ನೋಡಲು ರಾಜ್ಯದ ನಾನಾ ಭಾಗ ಹಾಗೂ ವಿದೇಶದಿಂದ ನೂರಾರು ಪ್ರವಾಸಿಗರು ಸೋಮವಾರ ಭೇಟಿ ನೀಡಿ, ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಂಡು ಪುಳಕಿತರಾದರು.
ಕಳೆದ ಮೂರು ತಿಂಗಳ ಹಿಂದೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಕಳೆದ ತಿಂಗಳು ಲಾಕ್ ಡೌನ್ ಸಡಿಲಿಕೆ ಮಾಡಲಾಗಿತ್ತು. ಕೇವಲ ಹಂಪಿ ವಿರೂಪಾಕ್ಷ ದೇಗುಲ ದರ್ಶನಕ್ಕೆ ಮಾತ್ರ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಅನುಮತಿ ನೀಡಿರಲಿಲ್ಲ. ಆದರೆ ಇಂದಿನಿಂದ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ.
ಸೋಮವಾರದ ದಿನ ವಿರೂಪಾಕ್ಷೇಶ್ವರನ ದರ್ಶನಕ್ಕೆ ಪ್ರವಾಸಿಗರು ದಾಂಗುಡಿ ಇಡುತ್ತಿರುವುದು ಕೂಡ ಕಂಡು ಬಂದಿದೆ. ದೂರದ ನಾನಾ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ಗುಂಪು, ಗುಂಪಾಗಿ ಬಂದು ವಿರೂಪಾಕ್ಷೇಶ್ವರನ ದರ್ಶನ ಭಾಗ್ಯ ಪಡೆದುಕೊಂಡರು.

ಸ್ಮಾರಕಗಳನ್ನು ಕಂಡು ಪ್ರವಾಸಿಗರು ಪುಳಕಿತರಾದರು
ಹಂಪಿಯ ಸ್ಮಾರಕಗಳಾದ ವಿಜಯ ವಿಠಲ ದೇಗುಲ, ಕಲ್ಲಿನ ರಥ, ಆನೆ ಮತ್ತು ಒಂಟೆ ಸಾಲು, ರಾಣಿ ಸ್ನಾನಗೃಹ, ಸಾಸಿವೆ ಕಾಳು ಗಣಪ, ಉದ್ದಾನ ವೀರಭದ್ರ, ಮಾತಂಗ ಪರ್ವತ, ತುಂಗಭದ್ರಾ ನದಿ ಸೇರಿದಂತೆ ಇನ್ನಿತರೆ ಪ್ರಮುಖ ಸ್ಮಾರಕಗಳನ್ನು ಕಂಡು ಒಂದು ಕ್ಷಣ ಪ್ರವಾಸಿಗರು ಪುಳಕಿತರಾದರು. ವಿದೇಶಿಗರಂತೂ ಕಳೆದ 3 ತಿಂಗಳಿಂದ ಹಂಪಿಯನ್ನು ನೋಡಲು ಅವಕಾಶ ಇಲ್ಲದಿರುವುದರಿಂದ ದಿಗ್ಭ್ರಾಂತರಾಗಿದ್ದರು. ಇಂದು ಹಂಪಿಯನ್ನು ಕಂಡು ವಿದೇಶಿಗರ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು.

ವಾಹನ ಸಂಚಾರದ ಸದ್ದು ಶುರು
ಇಡೀ ಹಂಪಿಯಲ್ಲಿ ಇಷ್ಟು ದಿನ ವಾಹನಗಳ ಸಂಚಾರದ ಇಲ್ಲದೇ ಒಂದು ರೀತಿಯಲ್ಲಿ ಅಕ್ಷರಶಃ ಸ್ಮಶಾನ ಮೌನವಾಗಿತ್ತು. ಆದರೀಗ ವಾಹನಗಳ ಸಂಚಾರದ ಸದ್ದು ಕಂಡುಬಂತು. ಪ್ರವಾಸಿಗರಲ್ಲದೇ ಕೋತಿಗಳು ತುತ್ತು ಅನ್ನಕ್ಕೂ ಪರದಾಡುತ್ತಿದ್ದವು. ಆದರೆ ಹೆಚ್ಚು ಪ್ರವಾಸಿಗರು ಬರುತ್ತಿರುವುದರಿಂದ ಕೋತಿಗಳಿಗೂ ಆಹಾರದ ಸಮಸ್ಯೆ ಬಗೆಹರಿದಂತಾಗಿದೆ.

ಪ್ರವಾಸಿಗರು ಭೇಟಿ ಯಾವಾಗ?
ಪ್ರವಾಸಿಗರು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಸ್ಮಾರಕಗಳನ್ನು ನೋಡಬಹುದಾಗಿದ್ದು, ಕಮಲಾಪುರದ ವಸ್ತು ಸಂಗ್ರಹಾಲಯ ತೆರೆಯಲಾಗಿದೆ. ಪ್ರವಾಸಿಗರಿಗೆ ನೋಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಜಯ ವಿಠ್ಠಲ ದೇಗುಲ, ವಸ್ತು ಸಂಗ್ರಾಹಲಯ, ಕಮಲ ಮಹಲ್ ನಲ್ಲಿ ಕಡ್ಡಾಯ ವಾಗಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರವಾಸಿಗರನ್ನು ಪರೀಕ್ಷೆ ಮಾಡಲಾಗುತ್ತಿದೆ.
ಮೂರು ತಿಂಗಳಿಂದ ಹಂಪಿ ಸ್ಮಾರಕಗಳನ್ನು ನೋಡಲು ಅವಕಾಶವನ್ನು ಸರಕಾರ ನೀಡಿದ್ದಿಲ್ಲ. ಈಗ ಪ್ರವಾಸಿಗರು ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಸ್ಮಾರಕಗಳನ್ನು ವೀಕ್ಷಣೆ ಮಾಡಬಹುದು. ಗೈಡ್ಸ್, ಹೋಟೆಲ್ ಉದ್ಯಮ, ವ್ಯಾಪಾರ ವಹಿವಾಟಿಗೆ ಜೀವ ಕಳೆ ಬಂದಂತಾಗಿದೆ. ಒಂದು ದಿನಕ್ಕೆ 2000 ಪ್ರವಾಸಿಗರಿಗೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಿದೇಶಿಗರು ಪ್ರತ್ಯಕ್ಷ
ಹಂಪಿಯ ಲೋಟಸ್ ಮಹಲ್ ಹಾಗೂ ತುಂಗಭದ್ರಾ ನದಿ ಸ್ನಾನ ಘಟ್ಟದ ಬಳಿ ವಿದೇಶಿ ಪ್ರವಾಸಿಗರು ಕಂಡು ಬಂದರು. ಮೂರು ತಿಂಗಳಿನಿಂದ ವಿಮಾನ ಹಾರಾಟವಿಲ್ಲ. ಅಲ್ಲದೇ, ಹಂಪಿಯಲ್ಲಿನ ವಿದೇಶಿಗರನ್ನು ಸ್ವದೇಶಗಳಿಗೆ ಕಳುಹಿಸಿ ಕೊಡಲಾಗಿತ್ತು. ಆದರೆ, ಈಗ ಸ್ಮಾರಕ ವೀಕ್ಷಣೆಗೆ ವಿದೇಶಿಗರು ಬಂದಿದ್ದು ಅಚ್ಚರಿಯನ್ನುಂಟು ಮಾಡಿದೆ.
ವಿದೇಶಿಗರನ್ನು ಗೈಡ್ ಗಳು ಕರೆದುಕೊಂಡು ಬಂದಿದ್ದಾರೆ. ಇಷ್ಟು ದಿನ ಎಲ್ಲಿದ್ದರು ಎಂಬುದು ತಿಳಿದಿಲ್ಲ. ಅವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಹಂಪಿ ವೃತ್ತದ ಭಾರತೀಯ ಸರ್ವೇಕ್ಷಣಾ ಪುರಾರತ್ವ ಇಲಾಖೆ ಉಪಾಧೀಕ್ಷಕ ಎಂ.ಕಾಳಿಮುತ್ತು ತಿಳಿಸಿದ್ದಾರೆ.












Click it and Unblock the Notifications