ಆನಂದ್ ಸಿಂಗ್ಗೆ ಹೊಸ ಬೇಡಿಕೆ ಇಟ್ಟ ಕಂಪ್ಲಿಯ ಜನರು
ಬಳ್ಳಾರಿ, ನವೆಂಬರ್ 30 : ಕರ್ನಾಟಕ ಸರ್ಕಾರ ಹೊಸಪೇಟೆಯ ವಿಜಯನಗರವನ್ನು ನೂತನ ಜಿಲ್ಲೆಯಾಗಿ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸರ್ಕಾರದ ತೀರ್ಮಾನದ ಬಗ್ಗೆ ಪರ, ವಿರೋಧ ಚರ್ಚೆ ನಡೆಯುತ್ತಿದೆ.
ಆರು ತಾಲೂಕುಗಳನ್ನು ಸೇರಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಆದರೆ, ಕಂಪ್ಲಿ ತಾಲೂಕಿನ ಜನರು ಸಚಿವ ಆನಂದ್ ಸಿಂಗ್ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ಕಂಪ್ಲಿಯನ್ನು ಬಳ್ಳಾರಿಯಿಂದ ವಿಜಯನಗರಕ್ಕೆ ಸೇರಿಸಿ ಎಂದು ಒತ್ತಾಯಿಸಿದ್ದಾರೆ.
ಕಂಪ್ಲಿ ತಾಲೂಕು ಹೋರಾಟ ಸಮಿತಿ, ವಿವಿಧ ಸಂಘಟನೆಗಳು ಕಂಪ್ಲಿಯನ್ನು ವಿಜಯನಗರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಕಂಪ್ಲಿ ಬಂದ್ಗೆ ಕರೆ ನೀಡಿವೆ. ಮತ್ತೊಂದು ಕಡೆ ಬಳ್ಳಾರಿ ಜಿಲ್ಲಾ ವಿಭಜನೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.

ಸಚಿವ ಆನಂದ್ ಸಿಂಗ್ ಈ ಕುರಿತು ಮಾತನಾಡಿದ್ದಾರೆ. "ಎಲ್ಲರ ಅಭಿಪ್ರಾಯ ಪಡೆದು ಜಿಲ್ಲಾ ವಿಭಜನೆ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಕೆಲವೇ ದಿನಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಕೆಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಆಗ ವಿಭಜನೆ ವಿರೋಧಿಗಳು ಸೇರಿದಂತೆ ಎಲ್ಲರೂ ಆಕ್ಷೇಪಣೆ ಸಲ್ಲಿಸಬಹುದು" ಎಂದರು.
ಬಳ್ಳಾರಿ ಜಿಲ್ಲೆ; ಕಂಪ್ಲಿ, ಕುರುಗೋಡು, ಸಂಡೂರು, ಸಿರಗುಪ್ಪ, ಬಳ್ಳಾರಿ ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿ ಉಳಿದಿವೆ. ಕಂಪ್ಲಿಯ ಜನರು ವಿಜಯನ ನಗರ ಜಿಲ್ಲೆಗೆ ನಮ್ಮನ್ನು ಸೇರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಸೋಮವಾರ ಕಂಪ್ಲಿ ಬಂದ್ ಕರೆ ನೀಡಿದ್ದಾರೆ.
ವಿಜಯನಗರ ಜಿಲ್ಲೆ; ಹೊಸಪೇಟೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಗಿ ತಾಲೂಕುಗಳನ್ನು ಹೊಸದಾಗಿ ರಚನೆಯಾಗುವ ವಿಜಯನಗರ ಜಿಲ್ಲೆಗೆ ಸೇರಿಸಲು ಸರ್ಕಾರ ಒಪ್ಪಿಗೆ ಕೊಟ್ಟಿದೆ.
ಬಳ್ಳಾರಿ ಜಿಲ್ಲೆ ವಿಭಜನೆ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲಾ ವಿಭಜನೆ ಖಂಡಿಸಿ ಭಾನುವಾರ ಸಚಿವ ಆನಂದ್ ಸಿಂಗ್ಗೆ ಘೇರಾವ್ ಹಾಕಲು ಪ್ರಯತ್ನ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications