8ನೇ ಬಾರಿ 160 ಕೆ.ಜಿ ಗುಂಡು ಎತ್ತಿದ ಗೆದ್ದ ಜಗಜಟ್ಟಿ; ಹೌದು ಹುಲಿಯಾ ಎಂದ ಸಿ.ಟಿ ರವಿ
ಬಳ್ಳಾರಿ, ಜನವರಿ 11: ಹಂಪಿ ಉತ್ಸವ-2020ರ ಸಲುವಾಗಿ ಎರಡನೇ ದಿನವಾದ ಇಂದು ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ ಗುಂಡು ಎತ್ತುವ ಸ್ಪರ್ಧೆ ಆಯೋಜನೆಗೊಂಡಿತ್ತು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೋಳಿ ಗ್ರಾಮದ ಇಬ್ರಾಹಿಂ ಮಕ್ಬುಲ್ ಸಾಬ್ ಅರಬ್ ಅವರು 160 ಕೆ.ಜಿ.ಭಾರದ ಕಲ್ಲನ್ನು ಎತ್ತಿ ಸತತ 8ನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು.
ಇಬ್ರಾಹಿಂ ಅವರು ಕಲ್ಲು ಎತ್ತುವ ಅಂಗಳಕ್ಕೆ ಬರುತ್ತಲೇ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಮೊಣಕಾಲಿನವರೆಗೆ ಕಲ್ಲು ಎತ್ತುತ್ತಿದ್ದಂತೆ ಹೌದೋ ಹುಲಿಯಾ ಹೌದೋ ಭೀಮ ಎಂದು ಕೂಗಿ ಸಚಿವ ಸಿಟಿ ರವಿ ಅವರು ಪ್ರೋತ್ಸಾಹ ನೀಡಿದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ಬರೋಬ್ಬರಿ 160 ಕೆ.ಜಿ. ಭಾರದ ಕಲ್ಲು ಇಬ್ರಾಹಿಂ ಅವರ ಭುಜದ ಮೇಲೆ ಬಂದಿತ್ತು.
ಹಂಪಿ ಉತ್ಸವ 2020ರ ಅದ್ಧೂರಿ ಆರಂಭ; ರಾಜಕೀಯ ಮೇಲಾಟಕ್ಕೂ ಬಳಕೆಯಾಯ್ತು ವೇದಿಕೆ
ಒಂದೇ ಒಂದು ಸಲವೂ ಕೆಳಗೆ ಒಗೆಯದೇ ಒಂದೇ ಪ್ರಯತ್ನದಲ್ಲಿ ಕಲ್ಲು ಎತ್ತಿದ ಇಬ್ರಾಹೀಂ ಮಕ್ಬುಲ್ ಸಾಬ್ ಸಾಹಸ ಕಂಡು ಜನರು ಚಪ್ಪಾಳೆ ತಟ್ಟಿದರು. ಆಧುನಿಕ ಭೀಮ ಖ್ಯಾತಿಗೆ ಭಾಜನವಾದರು. ಇಬ್ರಾಹೀಂ ಮಕ್ಬುಲ್ ಸಾಬ್ ವಯಸ್ಸು 29. ಕೃಷಿ ಕೆಲಸ ಮಾಡುತ್ತಿರುವ ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.